ಹುಣಸಗಿ: ‘ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಹೇಗೆ ಜೀವಿಸಬೇಕು ಎಂಬುದನ್ನು ರಾಮಾಯಣ ತಿಳಿಸಿದರೇ, ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ಭಗವದ್ಗೀತೆ ತಿಳಿಸುತ್ತದೆ’ ಎಂದು ಹಿರಿಯರಾದ ಮನೋಹರರಾವ ದ್ಯಾಮನಾಳ ಹೇಳಿದರು.
ಹುಣಸಗಿ ತಾಲ್ಲೂಕಿನ ಕಾಮನಟಗಿ ಗ್ರಾಮದ ಯಾಜ್ಞವಲ್ಕ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಗೀತಾಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಜೀವನದಲ್ಲಿ ಆತ್ಮ ಶುದ್ಧಿಗೆ ಗೀತೆಯ ಪಠಣದಿಂದ ಮಾತ್ರ ಸಾಧ್ಯ. ಅಲ್ಲದೇ ಅನೇಕ ಕ್ಲಿಷ್ಟಕರ ಪ್ರಸಂಗಗಳು ಬಂದಾಗ ಭಗವದ್ಗೀತೆ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಸ್ಥಿತಪ್ರಜ್ಞೆಯನ್ನು ತಂದು ಕೊಡುತ್ತದೆ’ ಎಂದರು.
ರಾಜನಕೋಳುರು ಗ್ರಾಮದ ನಿವೃತ್ತ ಉಪನ್ಯಾಸಕ ಭೀಮನಗೌಡ ಗುಳಬಾಳ ಮಾತನಾಡಿ, ‘ಭಗವದ್ಗೀತೆ ಶ್ರವಣ, ಪಠಣ ಕೇವಲ ಬ್ರಾಹ್ಮಣರಿಗೆ ಮಾತ್ರ ಎನ್ನುವ ತಪ್ಪು ಪರಿಕಲ್ಪನೆ ಇದೆ. ಇದು ಒಳ್ಳೇಯದಲ್ಲ, ನಿಷ್ಠೆ ಹಾಗೂ ಶ್ರದ್ಧೆಯಿಂದ ಯಾರೂ ಕೂಡಾ ಗೀತೆಯ ಸಾರವನ್ನು ತಿಳಿದುಕೊಳ್ಳಬಹುದು’ ಎಂದರು.
ದೇವರಾಜ ಕುಲಕರ್ಣಿ, ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಮಠದ ಸಿದ್ಧಲಿಂಗಯ್ಯ ಶಾಸ್ತ್ರಿ ಮಾತನಾಡಿದರು. ಡಾ.ಗೋವಿಂದರಾವ ಜಹಗೀರದಾರ ಅಧ್ಯಕ್ಷತೆ ವಹಿಸಿದ್ದರು.ಬೆಳಿಗ್ಗೆ ಹನುಮಂತ ಆಚಾರ್ಯ ಅವರ ನೇತೃತ್ವದಲ್ಲಿ ಗೀತಾ ಪಾರಾಯನ ನಡೆಯಿತು.
ಹುಣಸಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗೀತಾ ಚಿತ್ರ ಹಾಗೂ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು. ಯುವಕರಿಂದ ಬೈಕ್ ರ್ಯಾಲಿ ನಡೆಯಿತು. ಕಾರ್ಯಕ್ರಮದಲ್ಲಿ ಹುಣಸಗಿ, ರಾಜನಕೊಳೂರು, ಕೂಡಲಗಿ, ದ್ಯಾಮನಾಳ, ನಾರಾಯಣಪುರ, ಕೋಡೆಕಲ್ಲ, ಕಲ್ಲದೇವನಹಳ್ಳಿ, ಕನ್ನೇಳ್ಳಿ ಸೇರಿದಂತೆ ಇತರ ಗ್ರಾಮಗಳಿಂದ ಜನರು ಆಗಮಿಸಿದ್ದರು.