ಗುರುಮಠಕಲ್: ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಭೀಮಾ ಕೋರೆಗಾಂವ್ ವಿಜಯೋತ್ಸವದ 205ನೇ ವರ್ಷಾಚರಣೆ ಮಾಡಲಾಯಿತು.
ಕೃಷ್ಣ ಚಪೆಟ್ಲಾ, ರಾಜು, ಶಾಂತಪ್ಪ, ಮಲ್ಲಪ್ಪ ಹಾಗೂ ಭೀಮಶಪ್ಪ ಗುಡಿಸೆ ಮಾತನಾಡಿ, 1818ರಲ್ಲಿ 2ನೇ ಬಾಜಿರಾವ ಪೇಶ್ವೆ ಆಡಳಿತದ ವಿರುದ್ಧ ಮಹರ್ ಸಮುದಾಯದ ಯೋಧರು ಹೋರಾಡಿ ಜಯಗಳಿಸಿದ ನೆನಪಿಗೆ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕೇವಲ ಬೆರಳೆಣಿಕೆಯ ಮಹರ್ ಯೋದರು ಸಿದ್ದನಾಕನ ನಾಯಕತ್ವದಲ್ಲಿ ಪೇಶ್ವೆ ಆಡಳಿತವನ್ನು ಸೋಲಿಸುವ ಮೂಲಕ ದಲಿತರ ಶೌರ್ಯ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿದಿದ್ದ ದಿನವನ್ನು ನಾವು ಶೌರ್ಯದಿನವೆಂದು ಆಚರಿಸುತ್ತೇವೆ. ಆ ಮೂಲಕ ದಲಿತ ಸಮುದಾಯ ಸ್ವಾಭಿಮಾನದಿಂದ ಮತ್ತು ಸಂಗಟಿತರಾಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
ಈ ವೇಳೆ ಅಶೋಕ, ಲಾಲಪ್ಪ ತಲಾರಿ, ಮೊಗುಲಪ್ಪ, ಮಾಣಿಕ ಮುಕುಡಿ, ಮಲ್ಲಪ್ಪ ಯದ್ಲಾಪುರ, ರಮೇಶ ಜಾದವ, ಭೀಮಶಪ್ಪ ತಲಾರಿ, ಈರಪ್ಪ ಕರಿಗಾರ, ಹುಸೇನ ನಜರಾಪುರ, ವಿನೋದ ಯಲಾರಿ, ಮಾಣಿಕಪ್ಪ ಬೇಗಾರ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಇದ್ದರು.