ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗಿಂತ ಹೆಚ್ಚು ಮತ ಬಿಜೆಪಿಗೆ

ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡದ ಸ್ಥಳೀಯ ನಾಯಕರು, ಮುಖಂಡರು
Last Updated 24 ಮೇ 2019, 15:24 IST
ಅಕ್ಷರ ಗಾತ್ರ

ಯಾದಗಿರಿ: ಎರಡು ಲೋಕಸಭಾ ಕ್ಷೇತ್ರಗಳಿಗೆ ಹಂಚಿಕೆಯಾದ ಯಾದಗಿರಿ ಜಿಲ್ಲೆಯಲ್ಲಿ ಯಾದಗಿರಿ ಮತ್ತು ಸುರಪುರಕ್ಕೆ ಬಿಜೆಪಿ, ಶಹಾಪುರಕ್ಕೆ ಕಾಂಗ್ರೆಸ್, ಗುರುಮಠಕಲ್‌ಗೆ ಜೆಡಿಎಸ್‌ ಶಾಸಕರು ಇದ್ದಾರೆ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ.

ಯಾದಗಿರಿಯಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮತ್ತು ಸುರಪುರದಲ್ಲಿ ಶಾಸಕ ರಾಜುಗೌಡ ಅವರ ಶ್ರಮದಿಂದಬಿಜೆಪಿಗೆ ಉತ್ತಮ ಮುನ್ನಡೆ ಸಿಕ್ಕಿದೆ.ಎನ್ನಲಾಗಿದೆ. ಶಹಾಪುರದಲ್ಲಿ ಕಾಂಗ್ರೆಸ್‌ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತು ಗುರುಮಠಕಲ್‌ನಲ್ಲಿ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಮೈತ್ರಿ ಅಭ್ಯರ್ಥಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ತಂದುಕೊಟ್ಟಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ ಅವರಿಗೆ 63,503 ಮತ ಬಂದರೆ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರಿಗೆ 88, 863 ಮತಗಳು ಬಂದಿವೆ. ಇದರಲ್ಲಿ 25,360 ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿದೆ.

ಸುರಪುರದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇಪ್ಪತ್ತೆರಡೂವರೆಸಾವಿರ ಶಾಸಕರಿಗೆ ಮುನ್ನಡೆ ಬಂದಿತ್ತು. ಲೋಕಸಭೆ ಚುನಾವಣೆಯಲ್ಲಿ ಲೀಡ್ ಕಾಪಾಡಿಕೊಂಡಿದೆ.

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ಗೆ 54,149 ಮತ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಅವರಿಗೆ 73,272 ಮತಗಳು ಬಂದಿವೆ. 19, 123 ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

ಯಾದಗಿರಿಯಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್‌ಗೆ 59,898 ಮತ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ 68,703 ಮತಗಳು ಬಿದ್ದಿವೆ. 8, 805 ಮತಗಳು ಮುನ್ನಡೆ ಸಿಕ್ಕಿದೆ.

ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ 58,801 ಮತ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌ ಅವರಿಗೆ 78,684 ಮತಗಳು ಬಂದಿವೆ. ಬಿಜೆಪಿಗೆ 19, 883 ಮತಗಳ ಮುನ್ನಡೆ ಸಿಕ್ಕಿದೆ.

ಗುರುಮಠಕಲ್ ಕ್ಷೇತ್ರದಲ್ಲಿ ಸತತ 8 ಬಾರಿ ಗೆಲುವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಭಾರೀ ಹಿನ್ನಡೆಯಾಗಿದೆ.

ಶಹಾಪುರದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. 2018ರಲ್ಲಿ 30 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದ ಶರಣಬಸಪ್ಪ ದರ್ಶನಾಪುರ ಈ ಬಾರಿ ಕಾಂಗ್ರೆಸ್‌ಗೆ ಮತ ಕ್ರೂಢೀಕರಿಸುವಲ್ಲಿ ವಿಫಲವಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಕಾರ್ಯಕರ್ತರು ಸ್ಥಳೀಯವಾಗಿ ಇನ್ನೂ ಮೈತ್ರಿ ಪರ ಇನ್ನೂ ಹೊಂದಿಕೊಂಡಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ ಲೋಕಸಭೆಗೆ ಬಿಜೆಪಿ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ಮೋದಿ ಅಲೆ, ಯುವಕರು ಹೆಚ್ಚಾಗಿ ಬಿಜೆಪಿ ಬೆಂಬಲಿಸಿದ್ದರಿಂದ ಬಿಜೆಪಿ ಉತ್ತಮ ಮುನ್ನಡೆ ಪಡೆದಿದೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲಿ ಸಂಘಟಿತ ಹೋರಾಟವಿಲ್ಲದೆ ಕ್ಷೇತ್ರದಲ್ಲಿ ಮತಗಳು ಬಿಜೆಪಿಗೆ ಹೋಗಲು ಕಾರಣವಾಗಿದೆ. ಚುನಾವಣೆ ಕೊನೆ ಹಂತದಲ್ಲಿ ಮುಖಂಡರು, ಕಾರ್ಯಕರ್ತರು ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.
ಶಹಾಪುರ ಮತ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಜೆಡಿಎಸ್‌ನರು ಕೆಲಸ ಮಾಡಿಲ್ಲ ಎನ್ನಲಾಗಿದೆ. ಕಾಂಗ್ರೆಸ್‌ ಶಾಸಕರಿದ್ದರೂ ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿ ಪಾಲಾಗಿಲ್ಲ.

ಗುರುಮಠಕಲ್‌ ಕ್ಷೇತ್ರದಲ್ಲಿ ಕೋಲಿ ಸಮಾಜ ಪ್ರಭಾವಿ ಮುಖಂಡರಾದ ಬಾಬುರಾವ್‌ ಚಿಂಚನಸೂರ ಪ್ರಭಾವ ಕೆಲಸ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮುನಿಸಿಕೊಂಡಿದ್ದ ಅವರು, ಕಾಂಗ್ರೆಸ್‌ಗೆ ಒಳಪೆಟ್ಟು ನೀಡಿದ್ದಂತೆ ಕಾಣುತ್ತಿದೆ. ಇಲ್ಲಿ ಜೆಡಿಎಸ್‌ ಶಾಸಕರಿದ್ದರೂ ಕಾಂಗ್ರೆಸ್ ಪರವಾಗಿ ಮತ ಬೀಳುವಂತೆ ಮಾಡಲಾಗಿಲ್ಲ.

ಅವಿಭಜಿತ ಜಿಲ್ಲೆಯ ಮುಖಂಡರಾದ ಬಾಬುರಾವ್‌ ಚಿಂಚನಸೂರ್‌, ಡಾ.ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆ ತಟ್ಟಿದ್ದರಿಂದ ಈ ಬಾರಿ ಕಲಬುರ್ಗಿ ಕ್ಷೇತ್ರಕ್ಕೆ ಒಳಪಡುವ ಗುರುಮಠಕಲ್ ಕ್ಷೇತ್ರದಲ್ಲಿ 19, 883 ಮತಗಳು ಬಿಜೆಪಿಗೆ ಮುನ್ನಡೆಯನ್ನು ತಂದು ಕೊಟ್ಟಿವೆ. ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಇರುವಾಗ ಡಾ. ಮಾಲಕರಡ್ಡಿ ಬಿಜೆಪಿಗೆ ಮುನ್ನಡೆ ತಂದುಕೊಡಲು ಯಶಸ್ಸಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT