ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಮಾಜ ನಿರ್ಮಾಣ ಅಗತ್ಯ: ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀ

ಸಿದ್ದಲಿಂಗೇಶ್ವರ ಪ್ರಥಮ ಜಾತ್ರಾ ಮಹೋತ್ಸವ
Last Updated 12 ಏಪ್ರಿಲ್ 2019, 14:57 IST
ಅಕ್ಷರ ಗಾತ್ರ

ಯರಗೋಳ: ‘ಭಾರತ ದೇಶವು ಧಾರ್ಮಿಕ ನಂಬಿಕೆ ಮೇಲೆ ನಿಂತಿದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಹಾಳು ಮಾಡಲು ಯತ್ನಿಸುತ್ತಿವೆ. ಜನ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವ ಮೂಲಕ ಸಾಮರಸ್ಯ ಮತ್ತು ಸೌಹಾರ್ದದ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಶ್ರೀ ಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ವಡ್ನಳ್ಳಿ ಗ್ರಾಮದಲ್ಲಿ ಗುರುವಾರ ಹೆಡಗಿಮದ್ರಾ ಸಂಸ್ಥಾನ ಮಠದ ಶಾಖಾಮಠವಾದ ಸಿದ್ದಲಿಂಗೇಶ್ವರ ಪ್ರಥಮ ಜಾತ್ರಾ ಮಹೋತ್ಸವ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ಮಠಮಾನ್ಯಗಳು ಅನಾದಿ ಕಾಲದಿಂದ ನಿಸ್ವಾರ್ಥದಿಂದ ತ್ರೀವಿಧ ದಾಸೋಹಗಳ ಮೂಲಕ ದೇಶದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಬರುತ್ತಿವೆ ಎಂದು ಹೇಳಿದರು.

ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಶರಣ ಮಹಾತ್ಮರು ಹಲವು ತೊಂದರೆ ಅನುಭವಿಸಿದರು. ಸಂಕಷ್ಟದ ಮಧ್ಯೆಯೂ ಅವರು ತಾವು ಹೊಂದಿದ ನಂಬಿಕೆ, ವಿಶ್ವಾಸ ಕಳೆದುಕೊಳ್ಳಲಿಲ್ಲ.ಕೊನೆಗಾದರೂಇಷ್ಟಾರ್ಥ ಈಡೇರುವ ನಂಬಿಕೆ ಅವರಲ್ಲಿತ್ತು. ಆ ಸಂಕಲ್ಪದಲ್ಲಿ ಮಹಾ ಶಕ್ತಿ ಇರುತ್ತದೆ. ಅದಕ್ಕೆ ಸಾಕ್ಷಿಯಾಗಿ ಲಿಂ. ಸಿದ್ದಲಿಂಗೇಶ್ವರರ ಸಂಕಲ್ಪ ಭಕ್ತಿ ಸಂಭ್ರದಿಂದ ಕಾಣುತ್ತಿದ್ದೇವೆ’ ಎಂದು ತಿಳಿಸಿದರು.

‘ಮಹಾತ್ಮರ ಸ್ವಭಾವ ಸಮಯ ಬಂದಾಗ ವಜ್ರಕ್ಕಿಂತ ಕಠಿಣವಾಗುತ್ತದೆ. ಕೆಲ ಸಂದರ್ಭದಲ್ಲಿ ಹೂವಿಗಿಂತ ಮೃದು ಸ್ವಭಾವ ಅವರಲ್ಲಿ ಕಾಣುತ್ತೇವೆ. ಎಲ್ಲರೂ ಧಾರ್ಮಿಕ ಪರಂಪರೆಗಳನ್ನು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ತಮ್ಮ ಬದುಕು ಸಾರ್ಥಕವಾಗುತ್ತದೆ’ ಎಂದರು.

‘ಶ್ರೀಮಠಕ್ಕೆ ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ನೇತೃತ್ವ ವಹಿಸಿಕೊಂಡಿದ್ದಾರೆ. ಅವರು ಕಡಿಮೆ ಸಮಯದಲ್ಲಿ ಸಮಾಜ ಮೆಚ್ವುವಂತಹ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡಿದಲ್ಲಿ ಇದೊಂದು ಪ್ರಸಿದ್ಧ ಕ್ಷೇತ್ರವಾಗುತ್ತದೆ’ ಎಂದರು.

ಪಾಳದ ಡಾ. ಗುರುಮೂರ್ತಿ ಶಿವಾಚಾರ್ಯರು ಹಾಗೂ ದೇವಾಪೂರದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು. ‘ಈ ನಾಡಿನಲ್ಲಿ ಶರಣರು ತಮ್ಮ ಆಧ್ಯಾತ್ಮಿಕ ತಪಸ್ಸಿನಿಂದ ಕಾಲಕಾಲಕ್ಕೆ ಪವಾಡ ಮಾಡುವ ಮೂಲಕ ಭಕ್ತರ ಸಂಕಷ್ಟ ದೂರಮಾಡಿ ಜನರ ಮನಸ್ಸಿನಲ್ಲಿ ಶಾಶ್ವತ ಉಳಿದಿದ್ದಾರೆ ಎಂದರು.

ವಡ್ನಳ್ಳಿ, ಹೆಡಗಿಮದ್ರಾ ಮಠಗಳ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿದರು. ‘ಕ್ಷೇತ್ರದಲ್ಲಿ ಬರದ ಛಾಯೆ ಆವರಿಸಿದೆ. ಶ್ರೀಶೈಲ ಜಗದ್ಗುರುಗಳ ಆಗಮನ, ಆಶೀರ್ವಾದಿಂದ ಅದು ದೂರವಾಗಿ ರೈತರ ಮುಖದಲ್ಲಿ ಸಂತಸ ಮೂಡಲಿ’ ಎಂದರು.

ಆರಂಭದಲ್ಲಿ ಕು. ಶೆರ್ವರಿಯ ಶಿವತಾಂಡವ ನೃತ್ಯ ಎಲ್ಲರ ಗಮನ ಸೆಳೆಯಿತು. ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಶಾಂತಯ್ಯ ಸ್ವಾಮೀ ವಡ್ನಳ್ಳಿ, ಬಸಯ್ಯ ಸ್ವಾಮಿ ಬೊಮ್ಮಶೆಟ್ಟಹಳ್ಳಿ, ಮಹಾಂತಯ್ಯ ಸ್ವಾಮಿ ಹೆಡಗಿಮದ್ರಾ, ರಾಮರಡ್ಡಿಗೌಡ ಕ್ಯಾಸಪನಳ್ಳಿ, ಕಿಶನರಾವ ಹೆಡಗಿಮದ್ರಾ, ವಿನಾಯಕರಡ್ಡಿ ಇದ್ದರು.

ಮಡಿವಾಳಯ್ಯ ಶಾಸ್ತ್ರೀ ಜೇರಟಗಿ ಸ್ವಾಗತಿಸಿದರು. ಇದಕ್ಕೂ ಮುನ್ನ ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT