ಯಾದಗಿರಿ: ಹಿಜಾಬ್, ಕೇಸರಿ ಶಾಲು ಬಗ್ಗೆ ಎದ್ದಿರುವ ವಿವಾದದ ಕಾರಣ ಗೃಹ ಮತ್ತು ಬೇರೆ ಬೇರೆ ಇಲಾಖೆಗಳಿಂದ ಸಲಹೆ ಪಡೆದು, ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಕೇಸರಿ ವಿವಾದಕ್ಕೆ ತೆರೆ ಎಳೆಯಲು ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಹೀಗಾಗಿ ಯಾವುದೇ ಗೊಂದಲ ಹಾಗೂ ಸಮಸ್ಯೆ ಇಲ್ಲ. ಇಂಥ ಏನೇ ಸಮಸ್ಯೆ ಬಂದರೂ ನಮ್ಮ ಸಮಾಜ ಎದುರಿಸಿ ಮುಂದೆ ಸಾಗುತ್ತದೆ ಎಂದರು.
ಇದಕ್ಕಿಂತ ದೊಡ್ಡ ಸಮಸ್ಯೆಗಳು ಬಂದಿದ್ದವು. ಅವುಗಳನ್ನು ಎದುರಿಸಿ ಸಮಾಜ ಮುಂದೆ ಹೋಗಿದೆ. ಸೋಮವಾರದಿಂದ ಶಾಲೆಗಳು ಆರಂಭ ಆಗುತ್ತವೆ ಎಂದರು.
ರಾಮನಗರ ಎಸ್ ಪಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅವಾಜ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ ಅವರಿಗೆ ಕಾರ್ಯನಿರ್ವಹಿಸಲು ಬಿಡಬೇಕು. ನಮ್ಮ ಉಸ್ತುವಾರಿ ಇರುವಂತ ಜಿಲ್ಲೆಯಲ್ಲಿ ಆಡಳಿತ ಹೇಗೆ ಎಂದು ತೋರಿಸಬೇಕು.
ನಮ್ಮ ಅವಧಿಯಲ್ಲಿ ಹೇಗೆ ಆಡಳಿತ ಇದೆ ಮೊದಲು ಹೇಗಿತ್ತು ಎಂದು ಜನ ತಿಳಿದುಕೊಳ್ಳಬೇಕು. ಅವಾಜ್ ಹಾಕುವುದರಿಂದ ಅವರ ಭಾಷೆ ಅವರಿಗೆ ಗೊತ್ತಾಗುತ್ತದೆ. ಓಲೈಸುವ ಕೆಲಸ ಮಾಡುವುದಿಲ್ಲ. ನಾವು ಜನಪರ ಕೆಲಸ ಮಾಡುತ್ತೇವೆ ಎಂದರು.
ಯಾರು ಯಾರ ಬೇಕಾದವರ ತರಹ ಆದರೂ ಅಗಲಿ ನಾವು ಹೇಗೆ ಇರಬೇಕು ಆಗೇ ಇರುತ್ತೇವೆ. ನಮ್ಮ ಕೆಲಸದ ಮೂಲಕ ವ್ಯತ್ಯಾಸ ಮಾಡುವಂತದ್ದು ಆಗುತ್ತದೆ. ನಾವು ಗಲಾಟೆ, ಜಗಳ ಮಾಡಲು ಬಂದಿಲ್ಲ. ನಾವು ಜನಪರ ಕೆಲಸ ಮಾಡಲು ಬಂದಿದ್ದೇವೆ ಎಂದರು.