ವಡಗೇರಾ: ತಾಲ್ಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಪ್ರತಿ ವರ್ಷ ಪ್ರವಾಹ ಮತ್ತು ಮಳೆಯಿಂದ ಮುಂಗಾರು ಬೆಳೆ ನಾಶವಾದರೆ; ಈ ವರ್ಷ ಕಾಲುವೆ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗಿವೆ.
‘ಅತಿಯಾದ ಮಳೆಯಿಂದಾಗಿ ಹೊಲಗಳಲ್ಲಿ ಈಗಾಗಲೇ ತೇವಾಂಶ ಹೆಚ್ಚಾಗಿದೆ. ಇದರಿಂದ ಬೆಳೆಗಳು ಕೊಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಈಗ ಕಾಲುವೆ ನೀರಿನಿಂದ ನಮ್ಮ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸಾಲ ಮಾಡಿ ಬಿತ್ತಿದ ಬೀಜ ಕೂಡ ಮಣ್ಣಿನ ಪಾಲಾಗಿದೆ’ ಎನ್ನುತ್ತಾರೆ ರೈತರು.
‘ಜಮೀನುಗಳಿಗೆ ಒಂದು ತಿಂಗಳಿನಿಂದ ಕಾಲುವೆ ನೀರು ನುಗ್ಗಿ ಹತ್ತಿ, ತೊಗರಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು’ ಎಂದು ರೈತರಾದ ದೇವಪ್ಪ, ನಾಗಪ್ಪ ಮನವಿ ಮಾಡಿದ್ದಾರೆ.