ಯಾದಗಿರಿ: ಪ್ರಪಂಚದಲ್ಲಿ ಮಧುಮೇಹಿಗಳ ಸಂಖ್ಯೆ ತೀವ್ರ ಹೆಚ್ಚಾಗುತ್ತಿದ್ದು, ಹೀಗಾಗಿ ಮಧುಮೇಹದ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.
ನಗರದ ಲುಂಬಿನಿ ವನದಲ್ಲಿ ವಿಶ್ವ ಮಧುಮೇಹ ದಿನದ ನಿಮಿತ್ತ ಯಾದಗಿರಿಯ ಇಂಡಿಯನ್ ಮೆಡಿಕಲ್ ಅಸೋಷಿಯೇಶನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಧುಮೇಹ ಉಚಿತ ತಪಾಸಣಾ ಶಿಬಿರವನ್ನು ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಮಧುಮೇಹಿಗಳು ಹೆಚ್ಚಾಗುತ್ತಿದ್ದು, ಇದು ಅತ್ಯಂತ ಕಳವಳಕಾರಿ ಸಂಗತಿ. ಬದಲಾದ ಜೀವನ ಮತ್ತು ಆಹಾರ ಪದ್ಧತಿಯಿಂದ ಮನುಷ್ಯ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ಅವುಗಳಲ್ಲಿ ಮಧುಮೇಹ ಹೆಚ್ಚಿನ ಸಂಖ್ಯೆಯಲ್ಲಿ ಪಸರಿಸುತ್ತಿದ್ದು, ಆ ಬಗ್ಗೆ ಎಲ್ಲರೂ ಕಾಳಜಿವಹಿಸಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಐಎಂಎ ಕಾರ್ಯದರ್ಶಿ ಡಾ.ವೀರೇಶ ಜಾಕಾ ಮಾತನಾಡಿ, ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾದ ಅಗತ್ಯವಿದೆ. ನಿತ್ಯ ವಾಯುವಿಹಾರ, ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನ.19ರಂದು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳಿಗೂ ಮತ್ತು ಎಲ್ಲ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿದ್ದು, ನೌಕರರು ಶಿಬಿರದ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಐಎಂಎ ಅಧ್ಯಕ್ಷ ಡಾ.ಸಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಐಎಂಎ ವತಿಯಿಂದ ಇಂಥ ಅನೇಕ ಉಚಿತ ಶಿಬಿರಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವುದರ ಮೂಲಕ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಹೇಳಿದರು.
ಶಿಬಿರದಲ್ಲಿ ವಿಶ್ವನಾಥರೆಡ್ಡಿ ಗೊಂದೆಡಗಿ, ಡಾ.ಸುಭಾಶ್ಚಂದ್ರ ಕೌಲಗಿ, ಬಸ್ಸು ಪಾಟೀಲ ಬಿಳ್ಹಾರ, ಸೂಗಪ್ಪ ಪಾಟೀಲ, ರೇವಣಸಿದ್ದಪ್ಪ ಕಂದಕೂರ, ಮುಂಡರಗಿ ಮಠ, ಕಾವೇರಿ, ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವಾಯುವಿಹಾರಿಗಳನ್ನು ಶಿಬಿರದಲ್ಲಿ ತಪಾಸಣೆ ಕೈಗೊಳ್ಳಲಾಯಿತು.
ಶಿಬಿರದಲ್ಲಿ ಸೈಮನ್, ರೆಡ್ಡಿ, ಶರಣು, ಬಸವರಾಜ, ಶಂಕರ್ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಡಾ.ಭಗವಂತ ಅನವಾರ, ಡಾ.ವಿಜಯ ಕುಮಾರ, ಡಾ.ರಾಜೇಂದ್ರ, ಡಾ.ಪ್ರದೀಪರೆಡ್ಡಿ, ಡಾ.ಪ್ರಶಾಂತ ಬಾಸೂತ್ಕರ್ ಸೇರಿದಂತೆ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.