ಕೊಡೇಕಲ್ಲ (ಹುಣಸಗಿ): ಕೊಡೇಕಲ್ಲ ಗ್ರಾಮದ ದಾಸರಗೋಟ್ ಬಡಾವಣೆಯಲ್ಲಿ ಬಾಲ್ಯವಿವಾಹ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರ ಮನೆಗೆ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ತಿಳಿವಳಿಕೆ ನೀಡಿ ಮದುವೆ ಮಾಡದಂತೆ ಎಚ್ಚರಿಕೆ ನೀಡಿದರು.
ಕೊಡೇಕಲ್ಲದ ದಾಸರಗೋಟ್ ಬಡಾವಣೆಯ ಆನಂದಪ್ಪ ಮೊಳಕಾಲು ಎಂಬುವರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ತಾಲ್ಲೂಕಿನ ಆರ್.ದಾಸರಗೋಟ್ ಗ್ರಾಮದ ಯುವಕನ ಜತೆ ಬುಧವಾರ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮೀನಾಕ್ಷಿ ಪಾಟೀಲ್ ಅವರು ತಮ್ಮ ತಂಡದೊಂದಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಯಾವುದೇ ಕಾರಣಕ್ಕೂ ಮದುವೆ ನಡೆಸದಂತೆ ಎಚ್ಚರಿಕೆ ನೀಡಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡರು.
ಈ ಸಂದರ್ಭದಲ್ಲಿ ಎಸಿಡಿಪಿಒ ಮೀನಾಕ್ಷಿ ಪಾಟೀಲ್ ಮಾತನಾಡಿ, ಕಾನೂನು ಪ್ರಕಾರ 18 ವರ್ಷ ತುಂಬಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಮದುವೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಗುರುದೇವಿ ಹಿರೇಮಠ, ಪಾರ್ವತಿ ಕಡಿ, ಸುಭದ್ರಾ ಕುಲಕರ್ಣಿ, ಗೀತಾ ಕುಲಕರ್ಣಿ, ಕನಕಪ್ಪ ಜಂಗಳಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.