ಯಾದಗಿರಿ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕ, ಪೋಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಪಾರ ಸಮಯವನ್ನು ಮೀಸಲಿಡುವುದು ಇಂದಿನ ಅಗತ್ಯವಾಗಿದೆ ಎಂದು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಸಂಚಾಲಕ ಪಿ.ವೇಣುಗೋಪಾಲ್ ಹೇಳಿದರು.
ನಗರದ ಎಸ್.ಡಿ.ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳನ್ನು ವಿದ್ಯಾವಂತನನ್ನಾಗಿ ಮಾಡುವುದು ಪೋಷಕರ ಕರ್ತವ್ಯವಾಗಿದೆ. ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡುವುದು ಕೂಡ ಅವಶ್ಯವಿದೆ ಎಂದು ಇದೇ ವೇಳೆ ಅಭಿಪ್ರಾಯಿಸಿದರು.
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರವಿಕುಮಾರ ನಾಯ್ಕಲ್ ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ವಿವರಿಸಿದರು. ಎಸ್.ಡಿ. ಶಾಲೆಯ ಪ್ರಗತಿಯಲ್ಲಿ ದುರ್ಗಪ್ಪ ಪೂಜಾರಿ ಹಾಗೂ ಶಿಕ್ಷಕಿಯರ ಪಾತ್ರ ಬಹು ಮುಖ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಶೈಕ್ಷಣಿಕ ಪ್ರಗತಿ ಸಾಧನೆಯೆಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ದುರ್ಗಪ್ಪ ಪೂಜಾರಿ ಮಾತನಾಡಿದರು. ಉಪನ್ಯಾಸಕ ಗುರುಪ್ರಸಾದ್ ವೈದ್ಯ ಇದ್ದರು.
ನಿವೃತ್ತ ಮುಖ್ಯ ಗುರು ಬನ್ನಮ್ಮ ದಾಸನಕೆರೆ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಪೆನ್ಸಿಲ್ ಚಾಕೊಲೆಟ್ ನೀಡಿದರು. ಇದೇ ವೇಳೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಮಂಜುಳ ಸ್ವಾಗತಿಸಿದರು. ಶಿಕ್ಷಕಿ ಗೀತಾ ನಿರೂಪಿಸಿದರೆ, ಶಿಕ್ಷಕಿ ಅನುರಾಧ ವಂದಿಸಿದರು.