ಯಾದಗಿರಿ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ರಾಜೂಗೌಡ, ಗುರು ಪಾಟೀಲ ಶಿರವಾಳ, ನಾಗರತ್ನ ಕುಪ್ಪಿ, ಶರಣಭೂಪಾಲರೆಡ್ಡಿ, ಬಿಜೆಪಿ ಮುಖಂಡರು ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.
ಆಲಮಟ್ಟಿ ಜಲಾಶಯದಿಂದ ವಿಜಯಪುರ, ಮುದ್ದೇಬಿಹಾಳ ಮಾರ್ಗವಾಗಿ ಜಿಲ್ಲೆಯ ನಾರಾಯಣಪುರ ಪ್ರವಾಸಿ ಮಂದಿರಕ್ಕೆ ಆಗಮಿಸಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.
ಹುಣಸಗಿ ತಾಲ್ಲೂಕಿನ ಕೋಡೆಕಲ್ ಬಳಿ ಗ್ರಾಮಸ್ಥರಿಂದ ಆಹವಾಲು ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ನೀರಾವರಿ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದರು. ನಂತರ ರಾಜನಕೊಳ್ಳೂರಿನಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಮಾಗನೂರು ಮನೆಗೆ ಭೇಟಿ ನೀಡಿ ಭೋಜನ ಮಾಡಿದರು.
ನಂತರ ತಿಂಥಣಿ ಮೌನೇಶ್ವರ ದೇವಸ್ಥಾನ, ಸುರಪುರ ತಾಲ್ಲೂಕಿನ ಜಡಿಶಾಂತಲಿಂಗೇಶ್ವರ ಹಿರೇಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ದೇವಾಪುರ ಸೇತುವೆ ಬಳಿ ನೆರೆಗೆ ಹಾನಿಗೀಡಾಗಿದ್ದ ಪ್ರದೇಶವನ್ನು ಯಡಿಯೂರಪ್ಪ ವೀಕ್ಷಿಸಿದರು. ಸುರಪುರ ಶಾಸಕ ರಾಜೂಗೌಡ ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಿದರು.
ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ, ಟೊಣ್ಣೂರು, ಗೌಡೂರು ಹಾಗೂ ಯಕ್ಷಂತಿ ಬಳಿ ಪ್ರವಾಹದಿಂದ ಹಾನಿಗೀಡಾಗಿದ್ದ ಪ್ರದೇಶವನ್ನು ಯಡಿಯೂರಪ್ಪ ವೀಕ್ಷಣೆ ಮಾಡಿದರು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ನೆರೆ ಹಾನಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಭಗವಾನ್ ಇದ್ದರು.