ಘಟನೆಯ ವಿವರ: ಲಕ್ಷ್ಮೀ ರಾಮರೆಡ್ಡಿ ಗುನ್ನೆನ್ನೋರ, ರಾಮರೆಡ್ಡಿ ಆಶಪ್ಪ ಗುನ್ನೆನ್ನೋರ ಹಾಗೂ ಕಲಬುರಗಿಯ ವಿಜಯಕುಮಾರ (ಮೋಹನರೆಡ್ಡಿ), ಒಂದು ವಾರದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ₹3.20 ಲಕ್ಷ ಪಡೆದು ಪರಾರಿಯಾಗಿದ್ದಾರೆ ಎಂದು ಪಟ್ಟಣದ ಹಸೀನಾ ಬಶೀರ್ ಶೇಖ್ ದೂರು ನೀಡಿದ್ದರು. ಆರೋಪಿಗಳು 15 ವರ್ಷಗಳ ಹಿಂದೆ ಗಾಜರಕೋಟ ಗ್ರಾಮದಿಂದ ಚಿತ್ತಾಪುರಕ್ಕೆ ತೆರಳಿದ್ದರು. ಕೆಲ ದಿನಗಳ ಹಿಂದೆ ಗುರುಮಠಕಲ್ ಪಟ್ಟಣದ ಪ್ರೀತಿಬಾಯಿ ತಿವಾರಿ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಇಲ್ಲಿನ ಜನರನ್ನು ಪರಿಚಯಿಸಿಕೊಂಡು ಬೆಂಗಳೂರು ನಗರ ಸೇರಿ ಇತರೆಡೆ ನಮ್ಮದು ಹಣಕಾಸು ಲೇವಾದೇವಿ ಸಂಸ್ಥೆಗಳಿವೆ ಎಂದು ನಂಬಿಸಿದ್ದರು. ಹಣ ದುಪ್ಪಟ್ಟು ಮಾಡಿಕೊಡುವ ನಂಬಿಕೆ ಮೂಡಿಸಿ ದೂರದಾರರೂ ಸೇರಿ ಇತರರಿಂದ ₹15.70 ಲಕ್ಷ ಪಡೆದಿದ್ದರು. ಮುಂದಿನ ವಾರ ಕೊಡುವುದಾಗಿ ಹೇಳಿ ಪರಾರಿಯಾಗಿದ್ದರು ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು. ‘ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಡಿವೈಎಸ್ಪಿ ವೀರೇಶ ಕರಡಿಗುಡ್ಡ ಅವರ ಮಾರ್ಗದರ್ಶನದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ₹1.19 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ ಹಾಗೂ ಮೂರನೇ ಆರೋಪಿ ವಿಜಯಕುಮಾರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಪಿಐ ಖಾಜಾ ಹುಸೇನ್ ತಿಳಿಸಿದರು.