ಶಹಾಪುರ: ಪ್ರತಿಯೊಂದು ಕ್ಷೇತ್ರದಲ್ಲಿ ಒಂದೊಂದು ವಿಶೇಷವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವುದರ ಜತೆಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಚರಬಸವೇಶ್ವರ ಗದ್ದುಗೆ ಆವರಣದಲ್ಲಿ ಭಾನುವಾರ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಆಯೋಜಿಸಿದ್ದ 24ನೇ ಸಗರನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚರಬಸವೇಶ್ವರ ಸೇವಾ ಸಂಸ್ಥೆಯು ಧಾರ್ಮಿಕ ಕಾರ್ಯಗಳೊಂದಿಗೆ ಸ್ಥಳೀಯ ಕಲೆ, ಸಾಹಿತ್ಯ ಮತ್ತು ಕಲಾವಿದರನ್ನು ನಾಡಿಗೆ ಪರಿಚಯಿಸುತ್ತಾ ಬಂದಿದೆ. ಸಗರನಾಡು ಕಲಾವಿದರು ಇನ್ನೂ ಹೆಚ್ಚಿನ ವೇದಿಕೆಗಳನ್ನು ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರುವಂತಾಗಬೇಕು ಎಂದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ‘ಒಳಿತು ಮಾಡೊ ಮನುಸಾ’ ಎಂಬ ಹಾಡು ಹಾಡುವ ಮೂಲಕ ನೆರೆದಿದ್ದ ಜನಮನ ರಂಜಿಸುವುದಲ್ಲದೆ ತಮ್ಮಲ್ಲಿರುವ ಕಲಾಸಕ್ತಿ ಹೊರಹಾಕಿದರು.
ನಗರಸಭೆ ಅಧ್ಯಕ್ಷೆ ಕಮಲಾಬಾಯಿ ಚಂದ್ರಶೇಖರ ಲಿಂಗದಹಳ್ಳಿ, ಎಪಿಎಂಸಿ ಕಾರ್ಯದರ್ಶಿ ಶಿವುಕುಮಾರ ದೇಸಾಯಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಮಹೇಶ ಆನೆಗುಂದಿ, ಡಿವೈಎಸ್ಪಿ ರಾಯಚೂರು ದತ್ರಾತ್ರೇಯ,ಪಿಐ ಶ್ರೀನಿವಾಸ ಅಲ್ಲಾಪುರೆ, ಪಿಎಸ್ಐ ಚಂದ್ರಕಾಂತ ಮೇಕಾಲೆ, ಅಯ್ಯಪ್ಪ, ಸಂತೋಷ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು