ಸುರಪುರ: ‘ದೇಶ ಮತ್ತು ರಾಜ್ಯದಲ್ಲಿ ಹಲವಾರು ಹೋರಾಟಗಳ ಮೂಲಕ ಭಾರತೀಯ ದಲಿತ ಪ್ಯಾಂಥರ್ ದಮನಿತರ ಧ್ವನಿಯಾಗಿ ಹೊರಹೊಮ್ಮಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.
ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಭಾರತೀಯ ದಲಿತ ಪ್ಯಾಂಥರ್ ತಾಲ್ಲೂಕು ಸಮಿತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಿತಿ ಸ್ಥಾಪಿತವಾಗಿ ಅರ್ಧ ಶತಮಾನ ಸಂದಿದೆ. ಸಮಿತಿ ದೇಶದಲ್ಲಿ ಅತ್ಯತ್ತಮ ಸಂಘಟನೆ ಎಂಬ ಹೆಗ್ಗಳಿಕೆ ಹೊಂದಿದೆ. ಈ ಬೆಳವಣಿಗೆಗೆ ಯುವಜನರೇ ಕಾರಣ’ ಎಂದರು.
ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಆದಪ್ಪ ಹೊಸ್ಮನಿ ಮಾತನಾಡಿ, ‘ತಾಲ್ಲೂಕು ಸಮಿತಿಗೆ ಪುನಶ್ಚೇತನ ನೀಡಿ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು, ನೂತನ ಪದಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಸಂಘಟನೆಯ ಬಲವರ್ಧನೆಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.
‘ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರು ಸೇರಿದಂತೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಅಗತ್ಯ ಬಿದ್ದಲ್ಲಿ ಹೋರಾಟಕ್ಕೂ ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.
‘ವೈಯಕ್ತಿಕ ವಿಷಯಗಳಿಗೆ ಸಮಿತಿಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್ ಮೇಲ್ ಮಾಡಿ ಸಂಘಕ್ಕೆ ಕಳಂಕ ತರವಂತಿಲ್ಲ. ಯಾರಾದರು ಅನ್ಯಾಯಕ್ಕೆ ಒಳಗಾದಲ್ಲಿ ತಕ್ಷಣವೇ ಸ್ಪಂದಿಸಿ ನೆರವಿನ ಹಸ್ತ ಚಾಚಬೇಕು. ಕೌನೂನು ಚೌಕಟ್ಟಿನಡಿ ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದರು.
ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎ.ಸಿ.ದಾನಪ್ಪ ಪ್ರಾಸ್ತಾವಿಕ ಮಾತನಾಡಿದರು.ಪೊಲೀಸ್ ಇನ್ಸ್ಪೆಕ್ಟರ್ ಸುನೀಲ ಮೂಲಿಮನಿ ಕಾರ್ಯಕ್ರಮ ಉದ್ಘಾಟಿಸಿದರು.
ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ ಹೊಸಮನಿ, ಸಮಿತಿಯ ಪ್ರಮುಖರಾದ ಮಿಲಿಂದ ಕುಮಾರ ಸನಗುಂದಿ, ಭೀಮರಾಯ ನಗನೂರ, ಮಲ್ಲಣ್ಣ ಕಟ್ಟಿಮನಿ, ನಾಗರಾಜ ಶಾವಂತಗೇರಿ, ಹಣಮಂತ ಕಿಸಿಪಿ, ಮಲ್ಲಪ್ಪ ಜಾಲಹಳ್ಳಿ, ಭೀಮರಾಯ ದೊಡ್ಡಮನಿ ಇದ್ದರು.
ಶಂಕರ ಶಹಾಬಾದ ಸ್ವಾಗತಿಸಿದರು. ಮಲ್ಲು ಕೆಸಿಪಿ ನಿರೂಪಿಸಿದರು. ರಮೇಶ ಬಾಚಿಮಟ್ಟಿ ವಂದಿಸಿದರು.
ಪದಾಧಿಕಾರಿಗಳು: ರಮೇಶ ಬಡಿಗೇರ ಬಾಚಿಮಟ್ಟಿ (ಅಧ್ಯಕ್ಷ), ಗೋಪಾಲ ಚಲುವಾದಿ, ಮಂಜುನಾಥ ಹೊಸಮನಿ (ಉಪಾಧ್ಯಕ್ಷರು), ಕಾಶಿಪತಿ ಮಾಲಗತ್ತಿ (ಪ್ರಧಾನ ಕಾರ್ಯದರ್ಶಿ), ಸುರೇಶ ಬಡಿಗೇರ (ಸಹ ಕಾರ್ಯದರ್ಶಿ), ರವಿಚಂದ್ರ ಹೆಮನೂರ, (ಸಂಘಟನಾ ಕಾರ್ಯದರ್ಶಿ), ಲಿಂಗರಾಜ ಮಂಗಿಹಾಳ (ಖಜಾಂಚಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.