ಯಾದಗಿರಿ: ಇಲ್ಲಿನ ನಗರಸಭೆ ಕಚೇರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕಚೇರಿಯಲ್ಲಿ ಕರ ಸಂಗ್ರಹಿಸುವ ಸ್ಥಳದಲ್ಲಿ ಕಂಪ್ಯೂಟರ್ ಆಪರೇಟರ್ಗಳು ಇಲ್ಲದಿರುವುದನ್ನು ಕಂಡು ಆಕ್ರೋಶಗೊಂಡು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ದಾಖಲೆಗಳ ಪರಿಶೀಲನೆ, ಮೊಟೆ ಷನ್ಗಾಗಿ ಬಂದಿರುವ ಅರ್ಜಿಗಳನ್ನು ನೋಂದಣಿ ಪುಸ್ತಕದಲ್ಲಿ ದಾಖಲೆ ಮಾಡಿಲ್ಲದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಪ್ರತಿ ದಿನ ಬರುವ ಅರ್ಜಿಗಳನ್ನು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ಬರೆಯುವಂತೆ ಸೂಚನೆ ನೀಡಿದರು.
ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿಗಳು ಎಷ್ಟು ವಿಲೇವಾರಿಯಾಗಿವೆ. ಬಾಕಿ ಉಳಿದವೆಷ್ಟು ಎಂಬುದರ ಕುರಿತು ಮಾಹಿತಿ ದಾಖಲಿಸಬೇಕು. ಜತೆಗೆ ಆನ್ಲೈನ್ನಲ್ಲಿ ದಾಖಲಿಸಬೇಕು. ಉದಾಸೀನತೆ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ಬಹುತೇಕ ಕಡೆ ವಿದ್ಯುತ್ ಕಂಬ, ಬೀದಿ ದೀಪಗಳಿಲ್ಲದಿರುವ ಕುರಿತು ದೂರುಗಳು ಬಂದಿವೆ. ಶೀಘ್ರವೇ ಆಯಾ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳನ್ನು, ಬೀದಿ ದೀಪಗಳು ಅಳವಡಿಸಬೇಕು ಎಂದು ಸೂಚಿಸಿದರು.
‘ಸ್ಥಳೀಯ ಕೋಟೆ ಪರಿಶೀಲಿಸಿ’
‘ಇಲ್ಲಿನ ಕೋಟೆ ಪ್ರದೇಶಕ್ಕೆ ತೆರಳಿ ಅಲ್ಲಿನ ವಸ್ಥುಸ್ತಿತಿಯನ್ನು ವಾರಕೊಮ್ಮೆ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಲ್ಲದೇ ನಗರಸಭೆಯ ಲೆಕ್ಕ ಶಾಖೆ ವಿಭಾಗ ಮತ್ತು ಸಕಾಲ ಸೇವಾ ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಅರಿತು ಪರಿಹರಿಸಬೇಕು’ ಎಂದು ಆದೇಶಿಸಿದರು.
ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಹಾಗೂ ಸಿಬ್ಬಂದಿ ಇದ್ದರು.