ಯಾದಗಿರಿ: ನಗರದ ಸ್ಟೇಷನ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕಿಂತ ಈ ವಾರ ತರಕಾರಿ ಬೆಲೆ ಹೆಚ್ಚಳವಾಗಿದೆ. ಇನ್ನು ಕೆಲವು ತರಕಾರಿ ದರ ಯಥಾಸ್ಥಿತಿಯಲ್ಲಿದೆ.
ಆಲ್ಲಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ದರ ಹೆಚ್ಚಳವಾಗಿದೆ. ಕಳೆದ ವಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿತ್ತು. ಈಗ ಹಬ್ಬದ ನಂತರ ಈರುಳ್ಳಿ ಬೆಲೆ ₹20 ಹೆಚ್ಚಳವಾಗಿದ್ದು, ₹60 ಬೆಲೆ ಇದೆ. ಟೊಮೊಟೋ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ಬೀನ್ಸ್ ಬೆಲೆ ಕಳೆದ ವಾರ ₹120 ಇದ್ದಿದ್ದು, ಈ ವಾರ ₹40 ಇಳಿಕೆಯಾಗಿದೆ. ಸದ್ಯ ₹80 ಬೆಲೆ ಇದೆ. ಈ ಮೂಲಕ ಬೇರೆ ತರಕಾರಿಯಂತೆ ಇಳಿಕೆ ಕಂಡಿದೆ.ಬೇಸಿಗೆಯ ಮದುವೆ ಸೀಜನ್ನಲ್ಲಿ ಬೀನ್ಸ್ ಬೆಲೆ ₹200 ಇತ್ತು. ನಂತರ ₹120ಕ್ಕೆ ಬಂದು ಈಗ ₹80ಗೆ ಬಂದಿದೆ. ಮದುವೆ ಕಾರ್ಯದ ವೇಳೆ ಬೀನ್ಸ್ಗೆ ಹೆಚ್ಚಿನ ಬೇಡಿಕೆ ಇತ್ತು.
ಪಾಲಕ್, ಕೊತಂಬರಿ, ಪುದೀನಾ, ಮೆಂತ್ಯೆ ಸೊಪ್ಪುಗಳ ಬೆಲೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ. ಕಳೆದ ವಾರದ ಇರುವಷ್ಟೆ ಬೆಲೆ ಇದೆ. ₹10ಗೆ ಕಟ್ಟಿನಂತೆ ಸಿಗುತ್ತದೆ.
ಚೌಕಾಸಿ ವ್ಯಾಪಾರ: ಮಾರುಕಟ್ಟೆಯಲ್ಲಿ ತರಕಾರಿ ದರ ಕೇಳಿ ಗ್ರಾಹಕರು ಚೌಕಾಸಿಗೆ ಮುಂದಾಗಿರುವುದು ಕಂಡು ಬಂದಿತು. ದರ ಜಾಸ್ತಿಯಾಯ್ತು, ಕಡಿಮೆ ಬೆಲೆ ಮಾಡಿಕೊಡಿ ಎಂದು ಗ್ರಾಹಕರು ವ್ಯಾಪಾರಿಗಳಿಗೆ ಮನವಿ ಮಾಡುತ್ತಿದ್ದರು. ಇದಕ್ಕೆ ಒಪ್ಪದ್ದಿದ್ದಾಗ ಮುಂದಿನ ಅಂಗಡಿಗೆ ತೆರಳುವುದು ನಡೆದಿತ್ತು.
ಎರಡು ಬಾರಿ ಪ್ರವಾಹ: ಜಿಲ್ಲೆಯಲ್ಲಿ ಎರಡು ಬಾರಿ ಕೃಷ್ಣಾ ನದಿ ಪ್ರವಾಹ ಉಂಟಾಗಿದ್ದು, ತರಕಾರಿ ಬೆಲೆ ಮೇಲೆ ಪ್ರಭಾವ ಬೀರಿದೆ. ಕೊಳ್ಳೂರು ಸೇತುವೆ ಮುಳುಗಡೆಯಾಗಿ ಎರಡು ದಿನ ರಸ್ತೆ ಸಂಪರ್ಕ ಬಂದ್ ಆಗಿತ್ತು. ಈ ಕಾರಣದಿಂದ ತರಕಾರಿ ಗಾಡಿಗಳು ಸುತ್ತುವರೆದು ಬರಬೇಕಾಯಿತು. ಅಲ್ಲದೆ ಬೆಂಗಳೂರು, ಚಿಂತಾಮಣಿ, ಚಿತ್ರದುರ್ಗ, ರಾಯಚೂರು, ಕಲಬುರ್ಗಿ, ಬೆಳಗಾವಿ, ಸೊಲ್ಲಾಪುರ ಹಾಗೂ ಹೈದರಾಬಾದ್ ಭಾಗದ ತರಕಾರಿ ಜಿಲ್ಲೆಗೆ ಆಮದು ಆಗುತ್ತಿರುವುದರಿಂದ ಬೆಲೆ ಹೆಚ್ಚಳವಾಗಿದೆ.
‘ಮಾರುಕಟ್ಟೆ ಬಳಿ ಹೋದರೆ ಕಡಿಮೆ ಬೆಲೆಗೆ ತರಕಾರಿ ಸಿಗುತ್ತದೆ. ಮನೆಮನೆಗೆ ಬರುವ ಪುಟ್ಟಿ ವ್ಯಾಪಾರಿಗಳಿಂದ ತರಕಾರಿ ತೆಗೆದುಕೊಂಡರೆ ₹5 ರಿಂದ 10 ರೂಪಾಯಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಇಲ್ಲಿ ಚೌಕಾಶಿ ಮಾಡಿಯಾದರೂ ನಮಗೆ ಸರಿಹೊಂದುವ ಬೆಲೆಗೆ ತರಕಾರಿ ತೆಗೆದುಕೊಳ್ಳಬಹುದು. ಆದರೆ, ಈಗಿನ ಬೆಲೆಯೂ ಜಾಸ್ತಿಯಾಯಿತು’ ಎಂದು ಗೃಹಿಣಿ ಅನಿತಾರಾಮುಹೇಳುತ್ತಾರೆ.
***
ಕಳೆದ ವಾರದ ಇದ್ದ ಬೆಲೆ ಈಗ ಇಲ್ಲ. ಹಬ್ಬದ ನಂತರವೂ ತರಕಾರಿ ಬೆಲೆ ಹೆಚ್ಚಳವಾಗಿದೆ. ಬೇರೆ ಕಡೆಯಿಂದ ಆಮದಾಗುತ್ತಿದ್ದು, ಅವುಗಳಲ್ಲಿ ಸಹಜವಾಗಿ ದರ ಏರಿಕೆಯಾಗಿದೆ.
- ಪ್ರಕಾಶ ಕೈಯನೋರು, ತರಕಾರಿ ವ್ಯಾಪಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.