ಗುರುಮಠಕಲ್: ‘ಶ್ರಾವಣ ಮಾಸದಲ್ಲಿ ಆಯೋಜಿಸುವ ಪ್ರವಚನ, ಭಜನೆ, ಕೀರ್ತನೆ ಸೇರಿದಂತೆ ಆಧ್ಯಾತ್ಮ ಸಾಧನೆಯು ಮಾನಸಿಕ ನೆಮ್ಮದಿ ನೀಡುತ್ತವೆ. ಆತ್ಮಶುದ್ಧಿಗಾಗಿ ಇಷ್ಟಲಿಂಗ ಪೂಜೆ ಸಹಕಾರಿಯಾಗಿದ್ದು, ಅಂಗವನ್ನೇ ಲಿಂಗವಾಗಿಸುವ ಮೂಲಕ ನಮ್ಮನ್ನು ಪವಿತ್ರಗೊಳಿಸುತ್ತದೆ’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಾಜಿನಗರ ಬಡಾವಣೆಯ ಭಕ್ತೆ ರಾಜಶ್ರೀ ರಘುನಾಥರೆಡ್ಡಿ ನಜರಾಪುರ ಅವರ ಮನೆಯಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗಪೂಜೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಜನತೆಯ ನಿರಂತರ ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡದಲ್ಲಿ ಸಿಲುಕುವುದು ಸಾದಾರಣ. ಆದರೆ, ಇಷ್ಟಲಿಂಗಪೂಜೆ ಮಾಡುವುದರಿಂದ ಒತ್ತಡ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.
ಸಹಜ ಶಿವಯೋಗ ಜೀವನವನ್ನು ಸರಳಗೊಳಿಸುವ ಜತೆ ನೆಮ್ಮದಿ ನೀಡುತ್ತದೆ. ಆದ್ದರಿಂದ ಖಾಸಾಮಠದ ವತಿಯಿಂದ ಶ್ರಾವಣಮಾಸದಲ್ಲಿ ಶಿವಯೋಗವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸುವ ಮೂಲಕ ಲಾಭಪಡೆಯುವಂತೆ ಅವರು ಸಲಹೆ ನೀಡಿದರು.