ಯಾದಗಿರಿ: ನಗರದ ನೂತನ ಅತಿಥಿಗೃಹದ ಸಮೀಪ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಗಳ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ₹ 4.74 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ಮತ್ತು ₹ 3.32 ಕೋಟಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡಗಳನ್ನು ನಿಗದಿತ ಅವಧಿಯಲ್ಲಿಗುಣಮಟ್ಟದಿಂದ, ಸುಸಜ್ಜಿತವಾಗಿ ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರ ಏಜೆನ್ಸಿಯವರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಪರಶುರಾಮ ಕುರಕುಂದಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಚನ್ನಬಸವ, ಸಹಾಯಕ ನಿರ್ದೇಶಕ ಪ್ರಭು ದೊರೆ, ವಸತಿನಿಲಯ ಪಾಲಕ ದೇವಿಂದ್ರಪ್ಪ ರುದ್ರವಾರ, ಶಂಕರಗೌಡ, ಶರಣಗೌಡ ಬಾಡಿಯಾಳ, ಗೋವಿಂದ, ಬಸವರಾಜಪ್ಪಗೌಡ ಚಿಕ್ಕಬೂದೂರ್ ಇದ್ದರು.