ಯಾದಗಿರಿ: ವಿಧಾನಸಭೆ, ಲೋಕಸಭೆ, ಪಂಚಾಯಿತಿ ಚುನಾವಣೆಗಳು ನಡೆಯುವುದು ಸಾಮಾನ್ಯ. ಆದರೆ, ಗ್ರಾಮದ ಹೆಸರಿಡಲು ಚುನಾವಣೆ ನಡೆದಿದ್ದು, ಸಂತ ಸೇವಾಲಾಲ್ ನಗರಕ್ಕೆ ಗೆಲುವು ಸಿಕ್ಕಿದೆ.
ಸರ್ಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಹಾಗೂ ಕಂದಾಯ ಗ್ರಾಮದ ನೂತನ ಹೆಸರುಗಳ ನಾಮಕರಣಕ್ಕಾಗಿ ಆದೇಶ ಮಾಡಿತ್ತು. ವಡಗೇರಾ ತಾಲ್ಲೂಕಿನ ಕಂಠಿ ತಾಂಡಾ ಹಾಗೂ ಕಮಲಾ ನಾಯ್ಕ್ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ಅಧಿಕಾರಿಗಳುಮುಂದಾಗಿದ್ದರು.ಕಮಲಾ ನಾಯ್ಕ್ ತಾಂಡಾದ ಜನ ಸೇವಾಲಾಲ್ ಹೆಸರಿಡಲು ಪಟ್ಟು ಹಿಡಿದಿದ್ದರು.ಕಂಠಿ ತಾಂಡಾದ ಜನ ಗೋಪಾಲ್ ನಾಯ್ಕ್ ಎಂದು ಹೆಸರಿಡಲು ಆಗ್ರಹಿಸಿದ್ದರು.
ಆಗ ಅಧಿಕಾರಿಗಳು ಎರಡೂ ತಾಂಡಾ ವಾಸಿಗಳ ಗ್ರಾಮ ಸಭೆ ಕರೆದಾಗ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕೆ.ಗೋಪಾಲ ನಾಯ್ಕ್ ನಗರದ ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ಆಗ ಉಪವಿಭಾಗಾಧಿಕಾರಿ ಚುನಾವಣೆ ಮುಖಾಂತರ ಗ್ರಾಮದ ನಾಮಕರಣಕ್ಕಾಗಿ ಆದೇಶ ನೀಡಿದರು.
ಗೋಪಾಲ್ ನಾಯ್ಕ್ ಕಂಠಿ ತಾಂಡಾ ಜನರಿಗೆ ಮನೆ ಕಟ್ಟಲು ನಿವೇಶನ ನೀಡಿದ್ದಾರೆ.
ಸೋಮವಾರ ವಡಗೇರಾ ಪಟ್ಟಣದ ಬನದ ರಾಚೋಟೇಶ್ವರ ಕಲ್ಯಾಣ ಮಂಟಪದಲ್ಲಿ ಚುನಾವಣಾಧಿಕಾರಿ ಸಮ್ಮಖದಲ್ಲಿ ಮತದಾನ ನಡೆಯಿತು.ಮುಂಬೈ, ಪುಣೆ ಹಾಗೂ ಬೆಂಗಳೂರಿಗೆ ಹೋಗಿದ್ದ ಜನ ಬಂದು ಮತದಾನ ಮಾಡಿದರು.
1,102 ಮತದಾರರಲ್ಲಿ ಸಂತ ಸೇವಾಲಾಲ್ ಗ್ರಾಮ ಎಂದು ನಾಮಕರಣವಾಗಲಿ ಎಂದು 284 ಜನ ಮತದಾನ ಮಾಡಿದರು. ಕೆ.ಗೋಪಾಲ ನಾಯ್ಕ್ ನಗರವಾಗಲಿ ಎಂದು 266 ಜನ ಮತ ಚಲಾಯಿಸಿದರು. ಇದರಲ್ಲಿ 19 ಮತಗಳು ತಿರಸ್ಕೃತಗೊಂಡವು.
18 ಮತಗಳ ಅಂತರದಿಂದ ಸಂತ ಸೇವಾಲಾಲ್ ನಗರಕ್ಕೆ ಗೆಲುವಾಗಿದೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಸಜ್ಜನಶೆಟ್ಟಿ ಘೋಷಣೆ ಮಾಡಿದರು.
ಯಾದಗಿರಿಯಲ್ಲಿ ಮುಂದಿನ ತಿಂಗಳು ಕಲ್ಯಾಣ ಕರ್ನಾಟಕ ಭಾಗದ ವಿಭಾಗ ಕಾರ್ಯಕ್ರಮ ಮಾಡಿ ಕಂದಾಯ ಗ್ರಾಮ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ವಿತರಣೆ ಮಾಡಲಿದ್ದಾರೆ.
ತಹಶೀಲ್ದಾರ್ ಸುರೇಶ ಅಂಕಲಗಿ, ಸಂಗಮೇಶ ದೇಸಾಯಿ, ಗಿರೀಶ ರಾಯಕೋಟಿ, ವಿಎ ಸಿದ್ದಣಗೌಡ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.