ವಡಗೇರಾ: ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಹೊಲಕ್ಕೆ ಹಾಕಿದ ತಂತಿ ಬೇಲಿಗೆ ವಿದ್ಯುತ್ ಸ್ಪರ್ಶಗೊಂಡು ಇಬ್ಬರು ರೈತರು, ಒಂದು ಎತ್ತು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಬಸವರಾಜ ಕಿಲ್ಲನಕೇರಾ (35), ಮೌಲಾನ ಮೋಬಿನ್ (28) ಮೃತಪಟ್ಟವರು.
ಘಟನೆ ವಿವರ: ರೈತ ಬಸವರಾಜ ಕಿಲ್ಲನಕೇರಾ ಎತ್ತು ಮೇಯಿಸಿಕೊಂಡು ಮರಳಿ ಮನೆಗೆ ಬರುವಾಗ ಮಾರ್ಗ ಮಧ್ಯದಲ್ಲಿರುವ ಹೊಲವೊಂದಕ್ಕೆ ಅಳವಡಿಸಿದ ತಂತಿ ಬೇಲಿಗೆ ಕೊಳವೆಬಾವಿಗೆ ವಿದ್ಯುತ್ ಪೂರೈಸುವ ವೈಯರ್ನಿಂದ ಬೇಲಿಗೆ ವಿದ್ಯುತ್ ಸ್ಪರ್ಶವಾಗಿದೆ. ಈ ವೇಳೆ ಎತ್ತಿನ ಕಾಲು ಬೇಲಿಗೆ ಸಿಕ್ಕಿಕೊಂಡಿದೆ. ಅದನ್ನು ಬಿಡಿಸಲು ಬಸವರಾಜ ಹೋದಾಗ ವಿದ್ಯುತ್ ಸ್ಪರ್ಶಿಸಿದೆ. ಮತ್ತೊಬ್ಬ ರೈತ ಮೌಲಾನ ಮೋಬಿನ್ ಎನ್ನುವವರು ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಿ ಮನೆಗೆ ಮರಳುವಾಗ ಎತ್ತು ಮತ್ತು ಬಸವರಾಜ ಒದ್ದಾಡುತ್ತಿರುವುದನ್ನು ಕಂಡು ಅವರನ್ನು ಬಿಡಿಸಲು ಹೋಗಿ ಅವರು ಸಹ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.