ಠಾಣಗುಂದಿ (ಯರಗೋಳ):ಅಮೃತ್ ಮಹೋತ್ಸವ ಯೋಜನೆಯಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ ತಾಲ್ಲೂಕಿಗೆ 5 ಗ್ರಾಮ ಪಂಚಾಯತಿಗಳು ಆಯ್ಕೆಯಾಗಿದ್ದು, ಈ ದಿಸೆಯಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಕ್ರಿಯಾ ಯೋಜನೆ ತಯಾರಿಸಿ ಕಾರ್ಯೊನ್ಮುಖರಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ತಿಳಿಸಿದರು.
ಇಲ್ಲಿನ ಠಾಣಾಗುಂದಿ ಗ್ರಾಮ ಪಂಚಾಯತಿಗೆಶುಕ್ರವಾರ ಭೇಟಿ ನೀಡಿ, ನರೇಗಾ ಯೋಜನೆಯ ಕಡತಗಳನ್ನು ಪರಿಶೀಲಿಸಿ ಮಾತನಾಡಿದರು.
ಅಮೃತ್ ಯೋಜನೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸುಂದರ ಗ್ರಾಮ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ಸ್ವಚ್ಛತೆ ಕಾಪಾಡಲು ಗ್ರಾಮದಲ್ಲಿನ ಒಣ ಕಸ ಹಾಗೂ ಹಸಿ ಕಸ ವಿಂಗಡಿಸಿ, ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತೆಗೆದುಕೊಂಡು ಹೊಗಲು ಪ್ರತಿ ಗ್ರಾಮ ಪಂಚಾಯತಿಗೆ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದೆ. ಸಂಗ್ರಹವಾಗುವ ಕಸವನ್ನು ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಾಗಿಸಬೇಕು ಎಂದು ಸೂಚಿಸಿದರು.
ಹೆಡಗಿಮದ್ರಾ ಗ್ರಾಮದ ಪ್ರೌಢ ಶಾಲೆಗೆ ಭೇಟಿ ನೀಡಿ, ಬಿಸಿ ಊಟದ ದಾಸ್ತಾನು, ಶಾಲಾ ಮಕ್ಕಳ ಹಾಜರಾತಿ ಪರಿಶೀಲಿಸಿದರು. ಮಕ್ಕಳಿಗೆ ಬಿಸಿ ಊಟದೊಂದಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸಿ, ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅಲ್ಲಿನ ಮುಖ್ಯಶಿಕ್ಷಕರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯತಿ ನರೇಗಾ ವಿಷಯ ನಿರ್ವಾಹಕ ಅನಸರ ಪಟೆಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೀಲಕಂಠ, ತಾಂತ್ರಿಕ ಸಹಾಯಕ (ನರೇಗಾ) ನಿಂಗಣ್ಣ, ಎಸ್ಬಿಎಂ ಸಂಯೋಜಕ ನಾರಾಯಣ ಚಂಡ್ರಿಕಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.