ಯಾದಗಿರಿ: ಪರೀಕ್ಷೆ ಬಗಗೆ ಭಯ ಪಡದೆ ತಾವು ಅಭ್ಯಾಸ ಮಾಡಿರುವುದನ್ನು ಆತ್ಮ ವಿಶ್ವಾಸದೊಂದಿಗೆ ಬರೆದಾಗ ಉತ್ತಮ ಅಂಕಗಳು ಪಡೆಯಲು ಸಾಧ್ಯವಾಗುತ್ತದೆ ಎಂದು ಎಸ್ಡಿಎಂಸಿ ಸದಸ್ಯ ಫಕೀರ ಸಾಬ್ ಅಭಿಪ್ರಾಯಪಟ್ಟರು.
ಗುರುಮಠಕಲ್ ತಾಲ್ಲೂಕಿನ ಕಂದಕೂರ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.
ಶಿಕ್ಷಣ ಪ್ರೇಮಿ ಸತ್ಯನಾರಾಯಣ ಮಾತನಾಡಿ, ಗುರು ಶಿಷ್ಯರ ಸಂಬಂಧ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಪೋಷಕರಿಗೆ ಶಿಕ್ಷಣದ ಬಗಗೆ ಮಾಹಿತಿ ಕೊರತೆ ಇರುತ್ತದೆ. ಇದನ್ನು ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ನಿಮ್ಮ ಭವಿಷ್ಯ ರೂಪಿಸುವಲ್ಲಿ ನೆರವಾಗುತ್ತಾರೆ. ಕಲಿತ ಶಾಲೆ ಹಾಗೂ ಗುರುಗಳನ್ನು ಗೌರವದಿಂದ ಕಾಣುವ ಮೂಲಕ ಉತ್ತಮ ಫಲಿತಾಂಶದೊಂದಿಗೆ ಅವರ ಮಹತ್ವ ಹೆಚ್ಚಾಗುವಂತೆ ಮಾಡುಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಮುಖ್ಯಗುರು ಎಸ್.ಎಂ.ಭೂತಾಲ, ಅಶೋಕ್ ರೆಡ್ಡಿ, ಶಿಕ್ಷಕರಾದ ವಿನೋದ್ ಕುಮಾರ್ ಗುಡಿ, ಮಧುಮತಿ ಸಿಂಗೆ, ಗಂಗಾಧರ್ ಬಡಿಗೇರ್, ಸಲಹುದ್ದೀನ್ ಇದ್ದರು. ವಿದ್ಯಾರ್ಥಿಗಳಾದ ಪ್ರಾರ್ಥನಾ ಹಾಗೂ ಸುಷ್ಮಾ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕ ನಾಗಪ್ಪ ಸ್ವಾಗತಿಸಿದರು. ಬಸವಲಿಂಗಪ್ಪ ನಿರೂಪಿಸಿದರು. ಶರಣಕುಮಾರ ವಂದಿಸಿದರು.