ಯಾದಗಿರಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿದು ಬಿಡುತ್ತಿದ್ದು, ನದಿ ದಂಡೆಯ ಹಳ್ಳಿಗಳ ರೈತರ ಬದುಕು ಮೂರಬಟ್ಟೆಯಾಗಿದೆ. ನದಿಯಲ್ಲಿ ನೀರು ಹರಿಯುತ್ತಿದ್ದರೂ ಪಂಪ್ಸೆಟ್ ಇಲ್ಲದ ಕಾರಣ ನೀರು ಹಾಯಿಸಲಾಗದೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ.
ಪ್ರತಿ ಸಲದಂತೆ ಪ್ರವಾಹ ಬಂದೇ ಬರುತ್ತದೆ ಎಂದು ಎಂದು ರೈತರು ಪಂಪ್ಸೆಟ್ಗಳನ್ನು ನದಿ ಪಾತ್ರದಿಂದ ನದಿ ದಂಡೆಗೆ ತಂದು ಇಟ್ಟಿದ್ದರು. ಪ್ರವಾಹ ಹೆಚ್ಚುತ್ತಿದ್ದು, ಪಂಪ್ಸೆಟ್ಗಳು ನೀರಲ್ಲಿ ಮುಳುಗಿವೆ. ಇನ್ನು ಕೆಲವು ಕೊಚ್ಚಿಕೊಂಡು ಹೋಗಿವೆ.
ಶಹಾಪುರ–ವಡೆಗೇರಾ ತಾಲ್ಲೂಕಿನ ನದಿ ದಂಡೆಯ 23 ಹಳ್ಳಿಗಳ ರೈತರ ಪಂಪ್ಸೆಟ್ಗಳು ನದಿಯಲ್ಲಿ ಮುಳುಗಿವೆ.
10 ವರ್ಷಗಳ ಹಿಂದೆ ನದಿಯಲ್ಲಿ ಪ್ರವಾಹ ಬಂದು ಜಮೀನು ಮುಳುಗಡೆಯಾಗಿತ್ತು. ಅದೇ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮಸ್ಥರು ಸ್ಮರಿಸಿದರು.
ಭೀಮಾ ನದಿಯಲ್ಲಿ ನೀರಿಲ್ಲ:ಕೃಷ್ಣೆ ಮೈದುಂಬಿ ಹರಿಯುತ್ತಿದ್ದರೆ ಭೀಮಾ ನದಿಯು ನೀರಿಲ್ಲದೆ ಭಣಗುಡುತ್ತಿದೆ. ಒಂದೆಡೆ ನೀರಿನಿಂದ ಸಮಸ್ಯೆ, ಇನ್ನೊಂದೆಡೆ ನೀರು ಇಲ್ಲದೆ ಸಮಸ್ಯೆಯಾಗಿದೆ.
* ಜಮೀನು ಜಲಾವೃತವಾಗಿದೆ. ಮೋಟಾರ್ ಅಳವಡಿಸಿ ಬೆಳೆಗೆ ನೀರು ಬಿಟ್ಟಿದ್ದೆ. ಈಗ ಬೆಳೆಯೂ ಇಲ್ಲ, ಪಂಪ್ ಸೆಟ್ಟೂ ಇಲ್ಲ. ಸರ್ಕಾರ ಪರಿಹಾರ ನೀಡಬೇಕು. –ಮಲ್ಲಯ್ಯ ಡೊಣ್ಣೆಗೌಡರ್, ಕೊಂಕಲ್.
* ಹೊಲಕ್ಕೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಬೀಜ, ರಸಗೊಬ್ಬರಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆ. ಅದೆಲ್ಲ ನೀರಲ್ಲಿ ಮುಳುಗಿ ಹೋಗಿದೆ. –ಹೊನ್ನಪ್ಪ ಪೂಜಾರಿ, ಕೊಂಕಲ್.