ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಾಯಿಸಿದರೆ ರಕ್ತಕ್ರಾಂತಿ ಸಾಧ್ಯತೆ

ಪ್ರಚಾರ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ
Last Updated 7 ಮೇ 2018, 12:18 IST
ಅಕ್ಷರ ಗಾತ್ರ

ಜೇವರ್ಗಿ: ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಬದಲಿಸಲು ಕೇಂದ್ರ ಸರ್ಕಾರ ಮುಂದಾದರೆ ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಎಚ್ಚರಿಸಿದರು.

ಪಟ್ಟಣದ ಸಿದ್ಧಲಿಂಗರೆಡ್ಡಿ ದಾಲ್ ಮಿಲ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ ಬಸವಣ್ಣನವರ ಕರ್ಮಭೂಮಿ. ಇಂತಹ ಪವಿತ್ರ ನೆಲದಿಂದ ಸಾಮಾಜಿಕ ಸಮಾನತೆ, ಕಾಯಕ, ದಾಸೋಹ ಸಂದೇಶವನ್ನು ನಾಡಿಗೆ ಹರಡಬೇಕು. ದೇಶದ ಸಂವಿಧಾನ ಆಪತ್ತಿನಲ್ಲಿದೆ. ಸಂವಿಧಾನ ಬದಲಾವಣೆ ಮಾಡಲು ಮುಂದಾಗಿರುವ ಕೋಮುವಾದಿ ಬಿಜೆಪಿಯವರಿಗೆ ರಾಜ್ಯದ ಜನತೆ ಅಧಿಕಾರ ನೀಡಬಾರದು’ ಎಂದರು.

‘ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ತೋರಿಸಿ ಲಿಂಗಾಯತರ ಮತ ಪಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ.ಬಿಜೆಪಿಯವರು ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆಯಲ್ಲಿ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ, ಅವರು ಮಾಡುತ್ತಿರುವುದು. ಸಬಕಾ ಸಾಥ್‌, ಸಬಕಾ ವಿನಾಶ್‌’ ಎಂದು ವ್ಯಂಗ್ಯವಾಡಿದರು.

‘ಬ್ಯಾಂಕುಗಳಲ್ಲಿ ಹಣವಿಲ್ಲ. ದೇಶದ ಜನತೆ ಹಣ ಪಡೆಯಲು ಪರದಾಡುವಂತಾಗಿದೆ. ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಮೋದಿ ದೇಶದ ಆರ್ಥಿಕ ಸ್ಥಿತಿ ಬುಡಮೇಲು ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 40 ರಾಷ್ಟ್ರಗಳನ್ನು ಸುತ್ತುವ ಮೂಲಕ ₹ 400 ಕೋಟಿ ಕೇಂದ್ರ ಸರ್ಕಾರದ ಹಣ ಹಾಳು ಮಾಡಿದ್ದಾರೆ. ಇಂತಹ ನಾಯಕರಿಗೆ ಅಧಿಕಾರ ನೀಡಿದರೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಆಪತ್ತು ಎದುರಾಗಲಿದೆ’ ಎಂದು ತಿಳಿಸಿದರು.

ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯಸಿಂಗ್ ಮಾತನಾಡಿ, ‘ತಂದೆ, ದಿವಂಗತ ಧರ್ಮಸಿಂಗ್ ಅವರಿಲ್ಲದೆ ಚುನಾವಣೆ ಎದುರಿಸುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಧರ್ಮಸಿಂಗ್ ಅವರು 50 ವರ್ಷದ ರಾಜಕೀಯ ಅನುಭವ ಹೊಂದಿದ್ದರು. ಜನರೊಂದಿಗಿನ ಒಡನಾಟ, ಆತ್ಮೀಯತೆ ಇಂದಿಗೂ ಸ್ಮರಣೀಯ. ತಂದೆಯವರ ದಾರಿಯಲ್ಲಿ ರಾಜಕಾರಣ ಮಾಡಲು ಪ್ರಯತ್ನಿಸಿದ್ದೇನೆ. ಆದರೆ, ಇಂದಿನವರೆಗೂ ಸಾಧ್ಯವಾಗಿಲ್ಲ. ಧರ್ಮಸಿಂಗ್ ಕುಟುಂಬದವರ ರಾಜಕೀಯ ಪರಂಪರೆ ಮುಂದುವರೆಸುವ ಶಕ್ತಿ ಕ್ಷೇತ್ರದ ಮತದಾರರಲ್ಲಿದೆ’ ಎಂದರು.

ಪ್ರಭಾವತಿ ಧರ್ಮಸಿಂಗ್, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ಅಬ್ದುಲ್ ಸತ್ತಾರಸಾಬ್ ಗಿರಣಿ, ಕಾಸಿಂ ಪಟೇಲ್ ಮುದವಾಳ, ಶೌಕತ್
ಅಲಿ ಆಲೂರ, ಸುಭಾಷ ಖಾನಗೌಡ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಶಿವಶರಣಪ್ಪ ಕೋಬಾಳ, ಫಯಾಜ್ ಜಮಾದಾರ್, ಮಹಿಬೂಬ್ ಚನ್ನೂರ್, ಬಶೀರ್ ಇನಾಮದಾರ್, ಗೊಲ್ಲಾಳಪ್ಪಗೌಡ ಮಾಗಣಗೇರಿ, ಬೈಲಪ್ಪ ನೆಲೋಗಿ, ಶಂಕರಗೌಡ ಕಲ್ಲೂರ್, ಕಾಶಿರಾಯಗೌಡ ಯಲಗೋಡ, ರಾಜಶೇಖರ ಸೀರಿ, ಮಲ್ಲಿಕಾರ್ಜುನ ಬೂದಿಹಾಳ, ಮಹಿಮೂದ್ ನೂರಿ, ಸಲಿಂ ಕಣ್ಣಿ, ಮರೆಪ್ಪ ಸರಡಗಿ ಸೇರಿದಂತೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

**
ಅಧಿಕಾರ ಬರುವವರೆಗೆ ಯಡಿಯೂರಪ್ಪ ಮುಂದೆ, ಅಧಿಕಾರ ಬಂದ ನಂತರ ಅನಂತಕುಮಾರ ಹೆಗಡೆ ಮುಂದೆ– ಯಡಿಯೂರಪ್ಪ ಹಿಂದೆ
- ಸಿ.ಎಂ.ಇಬ್ರಾಹಿಂ,ಕಾಂಗ್ರೆಸ್‌ ಮುಖಂಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT