ಶಹಾಪುರ: ನಗರದ ಬಸವೇಶ್ವರ ವೃತ್ತದ ಬಳಿ ಮಹಾಂತೇಶ್ವರ ಕಿರಾಣಿ ಅಂಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ 5ಕ್ಕೆ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ₹ 10 ಲಕ್ಷ ಮೌಲ್ಯದ ಕಿರಾಣಿ ಮತ್ತು ಆಹಾರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿ ಹೊತ್ತಿರುವುದು ಕಂಡ ಕೂಡಲೇ ಪಕ್ಕದ ಗುರುಪ್ರಸಾದ ಹೋಟೆಲ್ ಮಾಲೀಕರು ಅಗ್ನಿ ಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಆಗ್ನಿಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಅಂಗಡಿಯ ಹೆಚ್ಚಿನ ಸಾಮಗ್ರಿಗಳು ಬೆಂಕಿ ವ್ಯಾಪಿಸಿತ್ತು.
ಅಂಗಡಿಯ ಮೇಲ್ಛಾವಣಿ ಕಟ್ಟಿಗೆ ತುಂಡುಗಳನ್ನು ಇಡಲಾಗಿತ್ತು. ಅದರಿಂದ ಇನ್ನಷ್ಟು ಬೆಂಕಿ ವ್ಯಾಪಿಸಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯುತ್ ಅವಘಡಕ್ಕೆ ಶಾರ್ಟ್ ಸರ್ಕಿಟ್ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.