ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿ ಪುಸ್ತಕಗಳಿಗೆ ನೆಲವೇ ಆಸರೆ, ಎಲ್ಲೆಂದರಲ್ಲಿ ಬಿದ್ದ ಕೃತಿಗಳು

ಪುಸ್ತಕ ಜೋಡಿಸಿಡಲು ರ‍್ಯಾಕ್‌ ಸೌಲಭ್ಯವಿಲ್ಲ
Last Updated 12 ಫೆಬ್ರುವರಿ 2021, 1:49 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ 2,500ಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ನೆಲದ ಮೇಲೆ ಬಿದ್ದು, ಧೂಳುಮಯವಾಗಿವೆ. ಇದು ಪುಸ್ತಕ ಪ್ರೇಮಿಗಳ ಆಕ್ರೋಶಕ್ಕೆಕಾರಣವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಸಾವಿರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತದೆ. ಅಂಥ ಪುಸ್ತಕಗಳನ್ನು ಆಯಾ ಜಿಲ್ಲೆಗಳ ಇಲಾಖೆಗೆ ಕಳಿಸಿಕೊಡುತ್ತದೆ. ಆ ಜಿಲ್ಲೆಯವರು ಆ ಪುಸ್ತಕಗಳ ಮಾರಾಟ ಮಾಡಬೇಕಿದೆ. ಸಾವಿರಾರು ಪುಸ್ತಕಗಳನ್ನು ಕಳಿಸುವ ಇಲಾಖೆ ಅವುಗಳನ್ನು ಶಿಸ್ತುಬದ್ಧವಾಗಿ ಇಡಲು ರ್‍ಯಾಕ್‌ ಕಳಿಸಿಲ್ಲ ಎನ್ನುವುದು ಇಲಾಖೆ ಅಧಿಕಾರಿಗಳ ಅಸಹಾಯಕತೆಯಾಗಿದೆ.

₹50ರಿಂದ ₹600 ಬೆಲೆ ಇರುವ ಪುಸ್ತಕಗಳು: ಇಲಾಖೆ ಪ್ರಕಟಿಸುವ ಪುಸ್ತಕಗಳು ನೂರಾರು ರೂಪಾಯಿ ಮೌಲ್ಯವುಳ್ಳದ್ದಾಗಿವೆ. ₹50ರಿಂದ ₹600ರ ತನಕ ಬೆಲೆ ಬಾಳುವ ಪುಸ್ತಕಗಳಿವೆ. ಆದರೆ, ಅವುಗಳನ್ನು ಸರಿಯಾಗಿಡಲು ಜಾಗದ ಕೊರತೆ ಇದೆ.

ಎಲ್ಲೆಂದರಲ್ಲೇ ಬಿದ್ದ ಪುಸ್ತಕಗಳು: ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಒಂದು ಕೋಣೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಇಲ್ಲಿ ಕೂಡ ಎಲ್ಲೆಂದರಲ್ಲೇ ಪುಸ್ತಕಗಳನ್ನು ಇಡಲಾಗಿದೆ. ಒಂದರ ಮೇಲೆ ಒಂದು ಪೇರಿಸಿಡಲಾಗಿದೆ. ಇದರಿಂದ ಓದುಗರು ಯಾವ ಪುಸ್ತಕ ಖರೀದಿ ಮಾಡಬೇಕಾದರೂ ತಡಕಾಡಬೇಕಾಗುತ್ತದೆ.

ನೆಲದ ಮೇಲೆ ಬಿದ್ದ ಮೌಲಿಕ ಕೃತಿಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಲವಾರು ಪ್ರಕಟಣೆಗಳನ್ನು ಹೊರ ತಂದಿದೆ. ಆದರೆ, ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ. ಕೆಲವು ಬಾಕ್ಸ್‌ಗಳಲ್ಲಿದ್ದರೆ ಇನ್ನೂ ಕೆಲವು ನೆಲದ ಮೇಲೆ ಹರಡಲಾಗಿದೆ. ರ‍್ಯಾಕ್‌ ಇದ್ದರೆ ನೇರವಾಗಿ ಕೃತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಯಾವ್ಯಾವ ಪುಸ್ತಕ ಇವೆ?: ಬಸವಯುಗದ ವಚನ ಮಹಾಸಂಪುಟ: ಒಂದು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಇತಿಹಾಸದಲ್ಲಿ ವಿಜ್ಞಾನ ಸೇರಿದಂತೆಇನ್ನಿತರಸಾವಿರಾರು ಪುಸ್ತಕಗಳು ನೆಲದ ಮೇಲೆ
ಬಿದ್ದಿವೆ.

ಸಿಬ್ಬಂದಿ ಕೊರತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಹಾಯಕ ನಿರ್ದೇಶಕ, ಎಫ್‌ಡಿಎ, ಕಚೇರಿ ಸಹಾಯಕರು ಸೇರಿದಂತೆ ಮೂವರು ಕರ್ತವ್ಯದಲ್ಲಿದ್ದಾರೆ. ಇದರಲ್ಲಿ ಕಚೇರಿ ಸಹಾಯಕರು ಎರವಲು ಮೇಲೆ ಬಂದಿದ್ದಾರೆ. ಇದರಿಂದಲೂ ಪುಸ್ತಕಗಳನ್ನು ಸಂರಕ್ಷಣೆ ಮಾಡಲು ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಳಲಾಗಿದೆ.

ವಿವಿಧ ಜಯಂತಿ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆ ಹೊಣೆ ಒತ್ತಿರುವ ಇಲಾಖೆಯಲ್ಲಿ ಸಿಬ್ಬಂದಿಯಿಲ್ಲದೆ ಪರದಾಡುವುದು ಸಾಮಾನ್ಯವಾಗಿದೆ. ಜೊತೆಗೆ ಸಮನ್ವಯ ಕೊರತೆಯೂ ಇಲ್ಲಿದೆ. ಇದರಿಂದಲೂ ಪುಸ್ತಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ
ಎನ್ನಲಾಗುತ್ತಿದೆ.

‘ನೆಲೆದ ಮೇಲೆ ಪುಸ್ತಕಗಳನ್ನು ಇಟ್ಟಿರುವುದರಿಂದ ನಮಗೂ ಬೇಸರ ಇದೆ. ಆದರೆ, ಯಾವುದೇ ವಿಧಿಯಿಲ್ಲದೆ ಇಟ್ಟಿದ್ದೇವೆ. ಸರ್ಕಾರ ರ್‍ಯಾಕ್‌ ಒದಗಿಸಿದರೆ ನೀಟಾಗಿ ಇಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಕೊಟ್ರೋಶ ಮರಬನಳ್ಳಿ.

ಪುಸ್ತಕ ಪ್ರೇಮಿಗಳ ಆಕ್ರೋಶ: ‘ನೆಲದ ಮೇಲೆ ಪುಸ್ತಕಗಳನ್ನು ಇಟ್ಟು ಇಲಾಖೆ ಕನ್ನಡ ಪುಸ್ತಕಗಳಿಗೆ ಅಗೌರವ ತೋರುತ್ತಿದೆ. ಶೀಘ್ರವೇ ಸರ್ಕಾರ ಪುಸ್ತಕಗಳನ್ನು ಕಳಿಸುವ ಜೊತೆಗೆ ಸಂಗ್ರಹಿಸಿಡಲು ಸೂಕ್ತ ಸಲಕರಣೆಗಳನ್ನು ಒದಗಿಸಿಕೊಡಬೇಕು’ ಎಂದು ಪುಸ್ತಕ ಪ್ರೇಮಿಗಳು ಆಗ್ರಹಿಸಿದ್ದಾರೆ.

***

ಪುಸ್ತಕ ಇಡಲು ಜಾಗ ಇದೆ. ಆದರೆ, ಸಾವಿರಾರು ಪುಸ್ತಕಗಳನ್ನು ಒಂದು ಕಡೆ ಸಂಗ್ರಹಿಸಿಡಲು ರ್‍ಯಾಕ್‌ ಇಲ್ಲದಾಗಿದೆ. ಇದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ

-ಕೊಟ್ರೋಶ ಮರಬನಳ್ಳಿ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

ಸರ್ಕಾರ ಶೀಘ್ರವೇ ಪುಸ್ತಕ ಸಂಗ್ರಹಿಸಿಡುವ ರ್‍ಯಾಕ್‌ ಒದಗಿಸಿಕೊಡಬೇಕು. ಇಲ್ಲದಿದ್ದರೆ ಪುಸ್ತಕಗಳು ಧೂಳು ಹಿಡಿದು ಅವಸಾನದತ್ತ ಹೋಗಲಿವೆ

-ಬಸವರಾಜ ಕಲೆಗಾರ, ಪುಸ್ತಕ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT