ಯಾದಗಿರಿ: ದೇಶ ಕಂಡ ಮಹಾನ್ ವ್ಯಕ್ತಿಗಳ ದಿನಾಚರಣೆ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯ. ಸ್ವಾತಂತ್ರ್ಯ ತಂದುಕೊಟ್ಟ ಅವರ ಸಿದ್ದಾಂತಗಳಾದ ಸತ್ಯ, ಶಾಂತಿ, ಅಹಿಂಸೆಯಿಂದ ಜಗತ್ತನ್ನೆ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಅವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದ ಒಳತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಈ ಮಹಾನ್ ನಾಯಕನಿಗೆ ದೇಶವಾಸಿಗಳು ನಮನ ಸಲ್ಲಿಸಬೇಕು. ಈ ವರ್ಷ ಗಾಂಧೀಜಿಯವರ 153 ನೇ ಜನ್ಮ ವರ್ಷಾಚರಣೆಯಾಗಿದೆ. ಗಾಂಧೀಯ ಅಹಿಂಸೆ ಮತ್ತು ಸತ್ಯದ ಮುಂದಾಳು. ಭಾರತೀಯ ವಿಮೋಚನಾ ಹೋರಾಟಕ್ಕಾಗಿ ಅವರು ಸತ್ಯಾಗ್ರಹ ಮತ್ತು ಅಹಿಂಸಾ ಚಳವಳಿ ಮಾಡಿದರು ಎಂದರು.
ದೇಶ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿ ಸರಳತೆಯ ಹರಿಕಾರ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸೈನಿಕರು ಮತ್ತು ದೇಶದ ರೈತರು ಎರಡು ಕಣ್ಣು ಇದ್ದಂತೆ. ಜೈ ಜವಾನ್ ಜೈ ಕಿಸಾನ್ ಎಂಬ ಹೇಳಿಕೆಯ ಮೂಲಕ ಅವರ ಮಹತ್ವ ಸಾರಿದರು. ಗಾಂಧಿಜಿಯವರ ತತ್ವ ಸಿದ್ದಾಂತ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಕಾರ್ಯವೈಖರಿ ಎಲ್ಲಾ ಭಾರತೀಯರಿಗೆ ಆದರ್ಶ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಜಿ.ಎಂ.ವಿಶ್ವಕರ್ಮ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಕಾಲೇಜಿಗೆ ವಿವಿಧ ವಿಷಯಗಳ ಪುಸಕ್ತಗಳನ್ನು ದೇಣಿಗೆ ರೂಪದಲ್ಲಿ ನೀಡಿದರು. ಕಾರ್ಯಕ್ರಮದಲ್ಲಿ ಸತೀಶ ಕುಮಾರ ಹವಲ್ದಾರ್, ಬಸಲಿಂಗಪ್ಪ, ಸುಧಾ ಕೆ, ರೂಪಿಕಾ, ಅಪರ್ಣಾ ಜುಗೇರಿ, ರಾಜೇಶ್ವರಿ, ಚಂದ್ರಯ್ಯಗೌಡ, ಮಾರ್ಗರೇಟ್ ಇದ್ದರು.