ಶಹಾಪುರ: ‘ಸದಾ ಹಿಂದೂ ಪರ ಶ್ರಮಿಸುವ, ಹಿಂದೂ ಪರ ಧ್ವನಿ ಎತ್ತುವವರೇ ಮುಂಬರುವ ದಿನಗಳಲ್ಲಿ ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾಗಲಿದ್ದಾರೆ. ನಾವು ಒಗ್ಗಟ್ಟಾಗಿ ಎದ್ದು ನಿಂತಲ್ಲಿ ನಮ್ಮೆದುರ ನಿಲ್ಲುವವರಾರು ಇಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದ ಬುಧವಾರ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದೂಗಳ ಪರ ರಾಜ್ಯದಲ್ಲಿ ಪ್ರಮೋದ ಮುತಾಲಿಕ್ ಹಾಗೂ ಆಂದೋಲಾ ಶ್ರೀಗಳು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬನಾಗಿ ಕೆಲಸ ಮಾಡುತ್ತೇನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಜೆ ಪರವಾನಿಗೆ ನೀಡುವದಿಲ್ಲ ಹೇಳುವುದು ಸರಿಯಲ್ಲ. ಮಸೀದಿಗಳ ಮೇಲೆ ಧ್ವನಿವರ್ಧಕ ಹಚ್ಚುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವಿದ್ದರೂ ಯಾವೊಬ್ಬರಿಗೂ ಅದನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಲಾಗುತ್ತಿಲ್ಲ. ಆದರೆ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹಾಕಲು ಪರವಾನಿಗಿ ಬೇಡಿದರೆ ಕಾನೂನು ಬಾಹಿರವಾಗುತ್ತಾ’ ಎಂದು ಪ್ರಶ್ನಿಸಿದರು.
ಆಂದೋಲಾ ಸಿದ್ಧಲಿಂಗ ಸ್ವಾಮೀಜಿ, ನಮ್ಮ ದೇಶದಲ್ಲಿ ಎರಡೆರಡು ಕಾನೂನು ನಡೆಯುವದಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಹಿಂದೂ ಸಮಾಜವನ್ನು ಬೆಳೆಸಬೇಕಿದೆ’ ಎಂದರು.
ಡಾ.ಚಂದ್ರಶೇಖರ ಸುಬೇದಾರ, ಕರಣ ಸುಬೇದಾರ, ಡಾ.ಶರಣು ಬಿ.ಗುದ್ದುಗೆ, ಶ್ರೀಕಾಂತ ಸುಬೇದಾರ, ರಾಜೂ ಆನೇಗುಂದಿ ಸೇರಿದಂತೆ ಅಪಾರ ಸಂಖ್ಯೆಯ ಯುವಕರುಇದ್ದರು.