ಗುರುಮಠಕಲ್: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ತಿಳಿದ ಪಿಐ ದೌಲತ್ ಕುರಿ ನೇತೃತ್ವದ ಪೊಲೀಸ್ ತಂಡಬುಧವಾರ ದಾಳಿ ಮಾಡಿ ₹7.58 ಮೌಲ್ಯದ ಗಾಂಜಾ, ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮೂವರು ಆರೋಪಿಗಳು ಪಟ್ಟಣದ ನಿವಾಸಿಗಳಾಗಿದ್ದಾರೆ. ಮಾರಾಟ ಮಾಡುತ್ತಿದ್ದ ಮಹಿಪಾಲ ಮುಕುಡಿಯನ್ನು (23) ಬಂಧಿಸಲಾಗಿದೆ. ಗಾಂಜಾ ತಂದುಕೊಟ್ಟ ಮಲ್ಲಿಕಾರ್ಜುನ ಮೇತ್ರಿ, ವ್ಯವಹಾರದಲ್ಲಿ ಭಾಗಿಯಾಗಿದ್ದ ನವೀನ ರಾಮುಲು ಪಾಲಮೂರಿ ಪರಾರಿಯಾಗಿದ್ದಾರೆ.
‘ಇಂದಿರಾನಗರ ಬಡಾವಣೆಆಶ್ರಯ ಮನೆಯಲ್ಲಿ ಗಾಂಜಾ ಮಾರಾಟದ ವ್ಯವಹಾರ ನಡೆಯುತ್ತಿರುವಾಗ ದಾಳಿ ಮಾಡಿದಾಗ 758 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು, ಅದನ್ನು ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಹಾಗೂ ಇತರೆ ಪಂಚರ ಸಮಕ್ಷಮ ಪಂಚನಾಮೆ ಮಾಡಲಾಗಿ ₹7.58 ಮೌಲ್ಯದ ಗಾಂಜಾ ಎಂದು ಸಾಬೀತಾಗಿದೆ’ ಎಂದು ಪೊಲೀಸ್ ಸಿಬ್ಬಂದಿ ಪ್ರಜಾವಾಣಿಗೆ ಮಾಹಿತಿ ನೀಡಿದರು.
ತಂಡದಲ್ಲಿ ವಿಶ್ವನಾಥರೆಡ್ಡಿ, ನರೇಂದ್ರರೆಡ್ಡಿ, ದೇವೇಂದ್ರ, ರಾಮಲಿಂಗಪ್ಪ, ಶರೀಫ್, ಹಫೀಸ್, ದುರ್ಗಪ್ಪ ಇದ್ದರು. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.