ಯಾದಗಿರಿ: ‘ಸೋಲು ಗೆಲುವಿನ ಲೆಕ್ಕಾಚಾರವಿಲ್ಲದೆ ಕ್ರೀಡೆಗಳಲ್ಲಿ ಭಾಗವಹಿಸಿ, ಸೋತರೂ ಎದೆಗುಂದದೆ ಗೆಲ್ಲುವವರೆಗೂ ಪ್ರಯತ್ನಿಸಿ. ಅಂತೆಯೇ ಕ್ರೀಡೆಯ ಜತೆಗೆ ಓದಿಗೂ ಪ್ರಾಮುಖ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಕಲಬುರಗಿ ವಿಭಾಗಮಟ್ಟದ ದಸರಾ ಸಿಎಂ ಕಪ್ ಕ್ರಿಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತತ ಪ್ರಯತ್ನ ಹಾಗೂ ಕಠಿಣ ಪರಿಶಸ್ರಮದಿಂದ ಎಂತಹಾ ಕಠಿಣ ಗುರಿಯಾದರೂ ಯಶಸ್ಸು ಪಡೆಯಲು ಸಾಧ್ಯ ಎಂದರು.
ಉತ್ತಮ ನಾಗರೀಕರಾಗಲು ಸದ್ಗುಣಗಳು, ಉತ್ತಮ ಚಿಂತನೆಗಳು ಅತ್ಯವಶ್ಯ. ಆದ್ದರಿಂದ ಎಲ್ಲರೂ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸದ್ಗುಣ ಮತ್ತು ಸದಾಕಾಲ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢತೆ ಮತ್ತು ಆರೋಗ್ಯಯುತ ಜೀವನ ಸಿಗಲಿದೆ. ನಿಮ್ಮ ಪರಿಶ್ರಮದಿಂದ ಯಶಸ್ವಿಯಾಗುವ ಭರವಸೆಯಿದೆ ಎಂಉದ ಶುಭಹಾರೈಸಿದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ, ಇಲಾಖೆಯ ಕ್ರೀಡಾ ಸಿಬ್ಬಂದಿಗಳಾದ ನಂದುಕುಮಾರ, ದೊಡ್ಡಪ್ಪ ನಾಯಕ ಇದ್ದರು.