ಸುರಪುರ: ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ, ಚಿಂತಕರಿಗೆ ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯ ಮಟ್ಟದ ಸಮಿತಿಗಳಲ್ಲಿ ಪ್ರಾಶಸ್ತ್ಯ ನೀಡುವಂತೆ ಶುಕ್ರವಾರ ಕಲ್ಯಾಣ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಂದಿನ ಅವಧಿಗಳಿಗೆ ಈ ಭಾಗದವರಿಗೆ ಸಮಿತಿಗಳಲ್ಲಿ ಯಾವುದೇ ಅಧಿಕಾರ, ಅವಕಾಶ ನೀಡಿಲ್ಲ. ಇದರಿಂದ ಇಲ್ಲಿನ ಸಾಹಿತಿಗಳಿಗೆ, ಚಿಂತಕರಿಗೆ ಅಸಮಾಧಾನವಾಗಿದೆ. ಈ ಅಸಮತೋಲನವನ್ನು ಹೋಗಲಾಡಿಸಲು ನೂತನ ಅಧ್ಯಕ್ಷರು ಕ್ರಮ ವಹಿಸಬೇಕೆಂದು ವಿನಂತಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹೇಶ ಜೋಷಿ, ‘ನನ್ನ ಅವಧಿಯಲ್ಲಿ ಎಲ್ಲ ಪ್ರದೇಶಗಳ ಜನರಿಗೆ ಪ್ರಾಶಸ್ತ್ಯ ನೀಡಲಾಗುವುದು. ಖಂಡಿತ ಕಲ್ಯಾಣ ಕರ್ನಾಟಕ ಭಾಗದವರಿಗೆ ಉತ್ತಮ ಅವಕಾಶ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.
ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಪ್ರಾದೇಶಿಕ ನಿರ್ದೇಶಕ ಡಾ. ಎಸ್.ಕೆ. ಅರುಣಿ, ಶಾಸನ ತಜ್ಞೆ ಡಾ.ಹನುಮಾಕ್ಷಿ ಗೋಗಿ, ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆ ನಿಯೋಗದಲ್ಲಿದ್ದರು.