ಯಾದಗಿರಿ: ಬೆಂಗಳೂರಿನ ಮಿಂಟೊ ಆಸ್ಪತ್ರೆ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿರುವ ಬಂದ್ ಕರೆಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು, ನಗರ ಸೇರಿದಂತೆ ಜಿಲ್ಲೆಯ ಸುಮಾರು 40 ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರಗಳು ಬಂದ್ ಆಗಿದ್ದವು.
ಖಾಸಗಿ ಆಸ್ಪತ್ರೆಗಳಿಗೆ ಆಗಮಿಸಿದ್ದ ಗ್ರಾಮೀಣ ಪ್ರದೇಶದ ಜನ,ಬಾಗಿಲು ಹಾಕಿದ್ದರಿಂದ ಸರ್ಕಾರಿ ಆಸ್ಪತ್ರೆಯತ್ತ ಮುಖಮಾಡಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನಕ್ಕಿಂತ ಶೇಕಡ 20ರಷ್ಟು ರೋಗಿಗಳು ಹೆಚ್ಚಳವಾಗಿದ್ದರು. ಆಸ್ಪತ್ರೆ ಆವರಣದಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿತ್ತು.
ಇನ್ನೂ ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರಗಳ ಮುಂದೆ ಆಸ್ಪತ್ರೆ ಬಂದ್ ಆಗಿರುವ ಬಗ್ಗೆ ನೋಟಿಸ್ ಅಂಟಿಸಲಾಗಿತ್ತು. ಇದನ್ನು ನೋಡಿ ರೋಗಿಗಳು ವಾಪಸ್ ಆಗುತ್ತಿದ್ದರು. ಬೆಳಿಗ್ಗೆ 6 ಗಂಟೆಯಿಂದಲೇ ಮೆಡಿಕಲ್ಗಳು, ಖಾಸಗಿ ನರ್ಸಿಂಗ್ ಹೋಮ್ಗಳು ಬಂದ್ಆಗಿದ್ದವು.
‘ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗವನ್ನು (ಒಪಿಡಿ) ಬಂದ್ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕಡೆ ಐಎಂಒ ಸಂಘದ ವೈದ್ಯರು ಬಂದ್ ಮಾಡಿದ್ದಾರೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಆಯುಷ್ ಇಲಾಖೆಯವರು ಇದಕ್ಕೆ ಬೆಂಬಲಿಸಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಪ್ರಸನ್ನ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದರಿಂದ ಜಿಲ್ಲೆಯಲ್ಲಿ ಸಾವು–ನೋವು ಸಂಭವಿಸಿಲ್ಲ.