ಯರಗೋಳ: ಗ್ರಾಮದ ಪ್ರಸಿದ್ಧ ಗುಡ್ಡದ ಮಲ್ಲಯ್ಯನ ಜಾತ್ರೆ ಶನಿವಾರ ಬಹು ವಿಜೃಂಭಣೆಯಿಂದ ಜರುಗಿತು. ನಸುಕಿನಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಲ್ಲೆಯೂ ಸೇರಿದಂತೆ ಅಕ್ಕಪಕ್ಕದ ಜಿಲ್ಲೆ ಹಾಗೂ ನೆರೆ ರಾಜ್ಯದ ಜನರೂ ಪಾಲ್ಗೊಂಡರು.
ದೊಡ್ಡ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿಸಿದ ಮಲ್ಲಯ್ಯನ ಮೂರ್ತಿಯನ್ನು ಹೊತ್ತುಕೊಂಡುಭಕ್ತರು ಡೊಳ್ಳು, ಹಲಗೆ ಜತೆ ಮೆರವಣಿಗೆ ಮೂಲಕ ಗುಡ್ಡದಲ್ಲಿರುವ ಗುಹೆ ತಲುಪಿದರು. ಮಲ್ಲಯ್ಯ ಮಹಾರಾಜ್ ಕೀ ಜೈಕಾರ ಕೂಗಿದರು. ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು.
ಮಧ್ಯಾಹ್ನ 12ಕ್ಕೆ ಮಲ್ಲಯ್ಯನ ಪಲ್ಲಕ್ಕಿ ಮೆರವಣಿಗೆಯಲ್ಲಿ ಕಬ್ಬಿಣದ ಸರಪಳಿ ತುಂಡರಿಸುವ ಸ್ಥಳಕ್ಕೆ ಆಗಮಿಸಿ, ಪೂಜೆ ನೆರವೇರಿಸಿ ಸರಪಳಿ ತುಂಡರಿಸಲಾಯಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಯುವಕರು ಕೋಲಾಟ ಆಡಿ ಸಂಭ್ರಮಿಸಿದರೆ, ಯುವತಿಯರು ಗೆಳತಿಯರೊಟ್ಟಿಗೆ ಕಳಸವನ್ನು ಹಿಡಿದು ಭಕ್ತಿ ಸಮರ್ಪಸಿದರು.
ಜಾತ್ರೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಮಲ್ಲಯ್ಯನಿಗೆ ಹರಕೆ ಹೊತ್ತ ಭಕ್ತರು, ಪಾದಯಾತ್ರೆ, ಮಕ್ಕಳಿಗೆ ಜಾವಳ ತೆಗೆಯುವ ಕಾರ್ಯಕ್ರಮ ನೆರವೇರಿಸಿದರು. ಭಕ್ತರಿಗೆ ಹುಗ್ಗಿ, ಅನ್ನ, ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.