ಸುರಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಲ್ಲಿ ಮನೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ. ಕಳೆದ ಮೂರು ದಿನಗಳಿಂದ 8 ಸೆಂಟಿ ಮೀಟಿರ್ಗೂ ಅಧಿಕ ಮಳೆಯಾಗಿದೆ.
ಹಳ್ಳ, ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಕೆಲವಡೆ ರಸ್ತೆ ಕಿತ್ತು ಹೋಗಿದೆ. ಹಳ್ಳದ ಪಕ್ಕದಲ್ಲಿರುವ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ.
ಶೆಳ್ಳಗಿ, ಆಲ್ದಾಳ, ಗುಡಿಹಾಳ ಜೆ. ಹಾವಿನಾಳ, ಮುಷ್ಠಳ್ಳಿ, ದೇವರಗೋನಾಲ, ದೇವಪುರ, ಹಂದ್ರಾಳ, ಕವಡಿಮಟ್ಟಿ, ಚಂದಲಾಪುರ ಇತರ ಗ್ರಾಮಗಳಲ್ಲಿ ಹತ್ತಿ ಹಾನಿಯಾಗಿದೆ. ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.
ಹಾವಿನಾಳದ, ಪೇಠಮ್ಮಾಪುರ, ಶೆಳ್ಳಗಿಯಲ್ಲಿ ತಲಾ ಎರಡು, ಎಂ. ಬೊಮ್ಮನಳ್ಳಿ, ದೊರನಹಳ್ಳಿ, ಮಾಲಹಳ್ಳಿ, ಹದನೂರಿ, ಮಲ್ಲಾ ಬಿ. ಮತ್ತು ಶಾಂತಪುರದಲ್ಲಿ ತಲಾ ಒಂದೊಂದು ಮನೆಯ ಗೋಡೆಗಳು ಕುಸಿದಿವೆ.
ನಗರದ ರಂಗಂಪೇಟೆಯ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ನೀರು ಸರಬರಾಜು ಯೋಜನೆಗೆ ಅಗೆದಿರುವ ರಸ್ತೆಗಳ ತೆಗ್ಗು ಗುಂಡಿಗಳು ಮಳೆಯಿಂದ ಇನ್ನಷ್ಟು ಆಳಕ್ಕೆ ಕೊರೆಯಲ್ಪಟ್ಟಿವೆ. ಜನರು ತಿರುಗಾಡಲು ತೊಂದರೆಯಾಗಿದೆ. ವಾಹನಗಳು ಚಲಿಸಲು ಸಾಧ್ಯವಾಗದಷ್ಟು ಕೊರಕಲು ಉಂಟಾಗಿವೆ.