ಯಾದಗಿರಿ: ನಗರದ ವರ್ಕನಹಳ್ಳಿ ರಸ್ತೆಯ ಗೃಹ ಮಂಡಳಿ ಬಡಾವಣೆ ಬಳಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬಂಡೆಗಳನ್ನು ಸಿಡಿಸಲು ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಕೆಲವೆಡೆ ಮನೆಗಳು ಬಿರುಕು ಬಿಟ್ಟಿವೆ. ಇದರಿಂದ ನಿವಾಸಿಗಳು ಜೀವ ಭಯದಿಂದ ಜೀವನ ಸಾಗಿಸುತ್ತಿದ್ದಾರೆ.
ಗೃಹ ಮಂಡಳಿಯ 100 ವಸತಿ ಯೋಜನೆಯಡಿ2006ರಲ್ಲಿ ಇಲ್ಲಿ 15 ಮನೆಗೆಳುನಿರ್ಮಾಣವಾಗಿವೆ. ಆಗಿನ್ನೂ ಯಾದಗಿರಿ ಪುರಸಭೆ ಆಗಿತ್ತು. ಜಿಲ್ಲೆಯೂ ಆಗಿರಲಿಲ್ಲ. ಸರ್ವೆ ಸಂಖ್ಯೆ 33, 34, 35, 36 ರಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ.
ಸ್ಫೋಟದಿಂದ ಮನೆಗಳು ಬಿರುಕು ಬಿಟ್ಟಿವೆ. ಮನೆಯವರೆ ಇದನ್ನು ದುರಸ್ತಿ ಮಾಡಿಸಿಕೊಂಡಿದ್ದಾರೆ. ಆದರೂ ಸ್ಫೋಟದ ತೀವ್ರತೆಯಿಂದ ಬಿರುಕು ಬಿಡುತ್ತಲೇ ಇರುತ್ತಿವೆ. ಹೀಗಾಗಿ ಯಾರನ್ನು ಕೇಳುವುದು ಯಾರನ್ನು ಬಿಡುವುದು ಎಂದು ಅಲ್ಲಿಯ ನಿವಾಸಿಗಳು ಆರೋಪಿಸುತ್ತಾರೆ.
ಈಗ ರಸ್ತೆಯೂ ಸರಿಯಿಲ್ಲ.ಅಲ್ಲದೆ ಪ್ರವೇಶ ದ್ವಾರದಲ್ಲಿ ಸಣ್ಣದಾಗಿ ನಿರ್ಮಿಸಿದ ದೇವಸ್ಥಾನದ ಕಟ್ಟೆ ಬಿರುಕು ಬಿಟ್ಟಿದೆ.
ಕಾಟಾಚಾರದ ಪರಿಶೀಲನೆ: ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ದೂರು ಬಂದಾಗ ಮಾತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಗೆ ತೆರಳಿ ಕಾಟಾಚಾರಕ್ಕೆ ಎಂಬಂತೆ ಪರಿಶೀಲನೆ ಮಾಡುತ್ತಾರೆ. ಅಲ್ಲಿಂದ ಬಂದು ಫೈಲ್ ಮಾಡಿದರೆ ಮುಗಿಯಿತು ಎಂದು ಕುಳಿತುಕೊಳ್ಳುತ್ತಾರೆ. ಇದನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ.
ದೊಡ್ಡ ಕ್ವಾರಿ ನಿರ್ಮಾಣ: ಕಲ್ಲು ಗಣಿಗಾರಿಕೆ ನಡೆಸುವ ಪಕ್ಕದಲ್ಲಿ ದೊಡ್ಡ ಕ್ವಾರಿ ನಿರ್ಮಾಣವಾಗಿದೆ. ಕಲ್ಲಿನ ಗುಡ್ಡವನ್ನು ಒಂದು ಕಡೆಯಿಂದ ಆಪೋಷನ್ ಮಾಡಿಕೊಳ್ಳಲಾಗಿದೆ. ಮಳೆಗಾಲವಾದ್ದರಿಂದ ನೀರು ನಿಂತಿದೆ. ಅದನ್ನೇ ಮಹಿಳೆಯರು ಬಟ್ಟೆ ಒಗೆಯುವ ಸ್ಥಳವಾಗಿ ಮಾಡಿಕೊಂಡಿದ್ದಾರೆ. ದೊಡ್ಡ ಮಟ್ಟದ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಕಂಡು ಬಂದಿದೆ.
ಕಲ್ಲು ಸ್ಫೋಟಿಸಲು ಸಮಯವೇ ಇಲ್ಲದಾಗಿದೆ. ತುಂಬಾ ಭಯ ಆಗುತ್ತಿದೆ. ಆದರೂ ಹೇಗೋ ವಾಸ ಮಾಡುತ್ತಿದ್ದೇವೆ ಎನ್ನುತ್ತಾರೆ ಅಲ್ಲಿಯ ನಿವಾಸಿಗಳು.
ಯಂತ್ರಗಳ ಸದ್ದು:ಕಲ್ಲು ಪುಡಿ ಮಾಡುವ ಯಂತ್ರಗಳಿಂದಲೂ ಸದ್ದು ಬರುತ್ತದೆ. ಈ ಧೂಳಿನ ಕಣಗಳು ಹಾರಿ ಹೊಲದ ಅಕ್ಕಪಕ್ಕ ಮತ್ತು ಮನೆಗಳ ಬಳಿ ಬಂದು ಬೀಳುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ.ಸ್ಫೋಟಕ ಸಿಡಿಯುವ ಸದ್ದಿಗೆ ಮಕ್ಕಳು ಬೆಚ್ಚಿ ಬೀಳುತ್ತಿದ್ದಾರೆ.
ಗಣಿಗಾರಿಕೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಯಾದಗಿರಿಯಲ್ಲಿ ಹಳಗೇರಾ, ವರ್ಕನಹಳ್ಳಿ, ಶಹಾಪುರದ ದೊರನಹಳ್ಳಿ, ಡಿಗ್ಗಿ, ಹೊಸಕೇರಾ, ಸುರಪುರದ ಅಲ್ದಾಳ, ವಾಗಣಗೇರಾ ಮತ್ತಿತರ ಕಡೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕೆಲವು ಕಡೆ ಅನುಮತಿ ಇಲ್ಲದೆಯೂ ಕಾರ್ಯನಿರ್ವಹಿಸುತ್ತವೆ.
‘ಗಣಿಗಾರಿಕೆ ನಡೆಸುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ. ದೂರು ನೀಡಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆಯೇ ಹೊರತು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಲ್ಲಿಯ ನಿವಾಸಿ ಆರೋಪಿಸಿದರು.
ಗೃಹ ಮಂಡಳಿ ಅಕ್ಕಪಕ್ಕದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದುಹಿರಿಯ ವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಅಸೈಫುಲ್ಲ ಹೇಳಿದರು.
ಮನೆಪಕ್ಕದಲ್ಲಿಯೇ ದೊಡ್ಡ ಶಬ್ಧ ಕೇಳಿ ಬರುವುದರಿಂದ ಭಯವಾಗುತ್ತದೆ. ಮೊದಲೇಸರ್ಕಾರ ಕಟ್ಟಿಸಿಕೊಟ್ಟಿರುವ ಮನೆಗಳು ಯಾವಾಗ ಏನಾಗುತ್ತದೆಎಂದು ಆತಂಕದಲ್ಲಿ ಇದ್ದೇವೆ ಎಂದುಗೃಹ ಮಂಡಳಿ ನಿವಾಸಿ ಕಮಲಮ್ಮ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.