ಯಾದಗಿರಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಓದುಗರೊಬ್ಬರು ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿದೆ.
ಜಿಲ್ಲಾಧಿಕಾರಿ ಜೊತೆಗೆ ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯಾದಗಿರಿ ನಗರ ಹೊರವಲಯದ ಬುಡ್ಗ ಜಂಗಮ ನಿವಾಸಿ ಅಂಜನೇಯ ಕರೆ ಮಾಡಿ ತಮ್ಮ ಕಾಲೊನಿಯಲ್ಲಿ 40 ಕುಟುಂಬಗಳಿದ್ದು, ಇದುವರೆಗೂ ಕೋವಿಡ್ ಲಸಿಕೆ ಹಾಕಿಲ್ಲ. ಹೀಗಾಗಿ ನಮ್ಮ ಸಮುದಾಯಕ್ಕೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ಸ್ಥಳದಲ್ಲಿದ್ದ ಆರ್ಸಿಎಚ್ ಅಧಿಕಾರಿ ಡಾ.ಲಕ್ಷ್ಮಿಕಾಂತ ಅವರಿಗೆ ಬುಡ್ಗ ಜಂಗಮ ಕಾಲೊನಿಯಲ್ಲಿ ಲಸಿಕೆ ನೀಡುವಂತೆ ಸೂಚಿಸಿದ್ದರು.
38 ಮಂದಿಗೆ ಲಸಿಕೆ:ಸೋಮವಾರ ಮಧ್ಯಾಹ್ನ ತಮ್ಮ ಸಿಬ್ಬಂದಿಯೊಂದಿಗೆ ತೆರಳಿದ ಆರ್ಸಿಎಚ್ ಅಧಿಕಾರಿ ಡಾ.ಲಕ್ಷ್ಮಿಕಾಂತ ಅವರು ಜನರಿಗೆ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. ನಂತರ 38 ಮಂದಿಗೆ ಚುಚ್ಚುಮದ್ದು ನೀಡಿದರು.
ಈ ವೇಳೆ ವೈದ್ಯಾಧಿಕಾರಿ ಡಾ.ವಿನಿತಾ, ಆರೋಗ್ಯ ಸಿಬ್ಬಂದಿ ಸಿಲ್ವಿ, ಬಸವರಾಜ, ಪ್ರಕಾಶ, ಅಂಜನೇಯ ಇದ್ದರು.