ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ನೀರು ಹರಿಸಿದ್ದರಿಂದ ಮುಳುಗಡೆಯಾದ ನದಿ ದಂಡೆಯ ಗ್ರಾಮಸ್ಥರು ಜನರು ಜೀವನಕ್ಕೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತವು ಮನೆ ಹಾನಿಯಾದವರಿಗೆ ₹3,800 ಚೆಕ್ ನೀಡಿ ಬ್ಯಾಂಕ್ಗಳಿಗೆ ಅಲೆದಾಡುವಂತೆ ಮಾಡಿದೆ.
‘ಈಗ ಸರ್ಕಾರದ ಆದೇಶದ ಪ್ರಕಾರ ಮನೆ ಹಾನಿಯಾದ ಸಂತ್ರಸ್ತರ ಬ್ಯಾಂಕ್ ಪಾಸ್ಬುಕ್, ಆಧಾರ್ ಕಾರ್ಡ್ ದಾಖಲೆ ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಪಡೆದು ಉಳಿದ ₹6,200 ಖಾತೆಗೆ ಹಾಕಲಾಗುತ್ತಿದೆ. ಒಟ್ಟು ₹10 ಸಾವಿರ ನೀಡಲಾಗುತ್ತಿದೆ’ ಎಂದು ವಡಗೇರಾ ತಹಶೀಲ್ದಾರ್ ಸಂತೋಷರಾಣಿ ತಿಳಿಸಿದ್ದಾರೆ.
ನಿರಾಶ್ರಿತರ ಕೇಂದ್ರಗಳಲ್ಲಿ ಸೂಕ್ತ ಸೌಕರ್ಯ ಇಲ್ಲದಿದ್ದುದರಿಂದ ನೆರೆ ಸಂತ್ರಸ್ತರು ಮನೆಗಳಿಗೆ ಹೋಗಿ ಬೀಳುವುದೇ ಲೇಸೆಂದು ಹೊರಟು ನಿಂತರೂ ಜಿಲ್ಲಾಡಳಿತ ದವಸ, ಧಾನ್ಯ ನೀಡದೆ ಬರಿಗೈಯಲ್ಲೆ ಕಳಿಸಿತ್ತು. ಇದರಿಂದ ಸಾಲ ಮಾಡಿ ಅಗತ್ಯ ವಸ್ತುಗಳನ್ನು ಖರೀದಿಸುವ ಮಟ್ಟಿಗೆ ಇಳಿಯಬೇಕಾಯಿತು.