ಜಮ್ಮು: ಕದನವಿರಾಮ ಉಲ್ಲಂಘಿಸಿ ಪಾಕಿಸ್ತಾನವು ಮಂಗಳವಾರ ಬೆಳಿಗ್ಗೆ ಮತ್ತೆ ಷೆಲ್ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.
‘ಪಾಕಿಸ್ತಾನವು ಪೂಂಛ್ ಮತ್ತು ರಜೌರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಬಳಿಯ ಮುಂಚೂಣಿ ನೆಲೆಗಳು ಹಾಗೂ ಜನವಸತಿ ಪ್ರದೇಶಗಳ ಮೇಲೆ ಷೆಲ್ ದಾಳಿ ನಡೆಸಿದೆ’ ಎಂದು ಗಡಿ ಭದ್ರತಾ ಪಡೆ ವಕ್ತಾರರೊಬ್ಬರು ಹೇಳಿದ್ದಾರೆ.
‘ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ನಮ್ಮ ಯೋಧರು ಸೂಕ್ತ ಉತ್ತರ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ದಾಳಿಯಲ್ಲಿ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಾಳಿಗೊಳಗಾದ ಪ್ರದೇಶಗಳಲ್ಲಿ =ರುವ ಶಾಲೆಗಳನ್ನು ಮುಚ್ಚಿಸಲಾಗಿದೆ’ ಎಂದು ರಜೌರಿ ಜಿಲ್ಲಾಧಿಕಾರಿ ಇಕ್ಬಾಲ್ ಚೌಧರಿ ತಿಳಿಸಿದ್ದಾರೆ.
ಗಂಭೀರ ಚಿಂತನೆ ಅಗತ್ಯ: ಗಡಿಯಲ್ಲಿ ಶಾಂತಿ ನೆಲೆಸುವ ಕುರಿತು ಭಾರತ ಹಾಗೂ ಪಾಕಿಸ್ತಾನ ಗಂಭೀರ ಚಿಂತನೆ ಆರಂಭಿಸುವವರೆಗೂ ಉಭಯ ರಾಷ್ಟ್ರಗಳು ಪರಸ್ಪರ ಗುಂಡಿನ ದಾಳಿಯಲ್ಲಿ ತೊಡಗಿರುತ್ತವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.