ವಡಗೇರಾ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮಕ್ಕೆ ಮಂಜೂರಾಗಿದ್ದ ಪದವಿಪೂರ್ವ ಕಾಲೇಜು ಅನ್ನು ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮಕ್ಕೆ ಸ್ಥಳಾಂತರ ಮಾಡಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ. ಈ ನಿರ್ಧಾರವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾಲೇಜು ಮಂಜೂರು ಮಾಡಿತ್ತು. ಈಗಿನ ಸರ್ಕಾರ ಅದನ್ನು ಸ್ಥಳಾಂತರ ಮಾಡಿದೆ. ಆ ಮೂಲಕ ಈ ಭಾಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಕರವೇ ವಡಗೇರಾ ತಾಲ್ಲೂಕು ಘಕಟದ ಅಧ್ಯಕ್ಷ ಅಬ್ದುಲ್ ಚಿಗಾನೂರ ದೂರಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿಕ್ಷಣ ಮಂತ್ರಿ ಇದ್ದ ಸಮಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣ ನೀಡಿ ವಡಗೇರಾ ಪಟ್ಟಣದಲ್ಲಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಅನ್ನು ತಮ್ಮ ಮತಕ್ಷೇತ್ರ ಶಿರಸಿಗೆ ಸ್ಥಳಾಂತರ ಮಾಡಿಸಿಕೊಂಡಿದ್ದರು ಎಂದು ಅವರು ಹೇಳಿದರು.
ಸ್ಥಳಾಂತರ ಮಾಡಿದ ಕಾಲೇಜನ್ನು ಮರಳಿ ಬೆಂಡೆಬೆಂಬಳಿ ಗ್ರಾಮದಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ಈ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಶಿಕ್ಷಣ ಪ್ರೇಮಿಗಳು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ಬಂಧುಗೌಡ ಐರಡ್ಡಿ, ಸತೀಶ ಜಡಿ, ದೇವು ಜಡಿ, ಸೋಮು ಕೋಡಾಲ್, ಶ್ರೀನಿವಾಸ ಮಡಿವಾಳ, ಪೀರಸಾಬ ಮರಡಿ, ಜುಬಲಪ್ಪ ಕಟ್ಟಿಮನಿ, ಭೀಮು ಬೂದಿನಾಳ, ಸಲೀಮ್ ಬೆನಕನಹಳ್ಳಿ, ಅಬ್ದುಲ್ ಅಮೀದ್, ಅಶೋಕ ಇಟಗಿ, ಶರಣು ಕುಂಬಾರ ಹಾಗೂ ಅಫ್ರೋಜ್ ಇದ್ದರು.