ಯಾದಗಿರಿ: ನೇರ ಗುರಿ ಮತ್ತು ಸತತ ಪ್ರಯತ್ನ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಗರದ ಚೇತನಾ ವಿ.ಚಿಂತನಳ್ಳಿ ಸಾಕ್ಷಿಯಾಗಿದ್ದಾರೆ.
ಜಿಲ್ಲೆಯ ಸೈದಾಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಚೇತನಾ ಕರ್ನಾಟಕ ಲೋಕಸೇವಾ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಕಂಡು 41 ರ್ಯಾಂಕ್ ಪಡೆಯುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ನೇಮಕವಾಗಿದ್ದಾರೆ.
ಚೇತನಾ ಅವರು ಮೂಲತಃ ಗುರುಮಠಕಲ್ ತಾಲ್ಲೂಕಿನ ಚಿಂತನಳ್ಳಿ ಗ್ರಾಮದವರು. ರಾಯಚೂರಿನ ಎಲ್ವಿಡಿ ಕಾಲೇಜಿನಿಂದ ಪಿಯುಸಿ ಪದವಿ ಪಡೆದು, ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಪ್ರಸ್ತುತ ಕಲಬುರ್ಗಿಯ ಕೆಬಿಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಸಾರ್ವಜನಿಕ ಸೇವೆ ಮಾಡುವ ತುಡಿತ ಹೊಂದಿದ್ದರು. ಆ ಕನಸನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಯಾವುದೇ ಕೋಚಿಂಗ್ ತರಗತಿಗಳಿಗೆ ಹಾಜರಾಗದೆ ಸತತ ಓದಿದ್ದಾರೆ. 2017ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಇದೀಗ ವಾಣಿಜ್ಯ ತೆರಿಗೆ ಇಲಾಖೆಯ 41ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಚೇತನಾ ಅವರ ತಂದೆ ವೆಂಕಪ್ಪ ಚಿಂತನಳ್ಳಿ ಅವರು ಸರ್ಕಾರಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರು. ಹಲವು ವರ್ಷಗಳಿಂದ ಯಾದಗಿರಿಯಲ್ಲಿ ನೆಲೆಸಿರುವ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಚೇತನಾ ಅವರ ಹಿರಿಯ ಸಹೋದರಿ ಪ್ರತಿಭಾ ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಎಂಜಿನಿಯರಿಂಗ್ ಓದಿದ್ದರೂ ಸಾಮಾನ್ಯ ಜ್ಞಾನ, ಇತಿಹಾಸ, ಜಿಯಾಗ್ರಫಿ, ಅರ್ಥಶಾಸ್ತ್ರ ವಿಷಯಗಳನ್ನು ಹೆಚ್ಚು ಆಸಕ್ತಿಯಿಂದ ಶ್ರಮ ವಹಿಸಿ ಓದಿದೆ. ಹೀಗಾಗಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು.