ಹುಣಸಗಿ: ಪ್ರತಿಯೊಬ್ಬ ಸಾಹಿತಿ, ಲೇಖಕರು ಕೂಡಾ ಆಯಾ ಕಾಲಘಟ್ಟದ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಾಹಿತಿ ಸಿದ್ರಾಮ ಹೊನ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಡ್ರೀಮ್ಡ್ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕವನ ಹಿತವಾದ ಮಾತು ಪುಸ್ತಕ ಅನಾವಣ ಗೊಳಿಸಿ ಅವರು ಮಾತನಾಡಿದರು.
ಓರ್ವ ಸಾಹಿತಿ ಕವಿಯಾಗಬೇಕೆಂದರೆ ಅದು ಒಂದು ದಿನದ ಕಾರ್ಯವಲ್ಲ. ಬದಲಿಗೆ ನಿರಂತರವಾದ ಅಧ್ಯಯನ ಅವಶ್ಯಕವಾಗಿರುತ್ತದೆ. ಆಗ ಮಾತ್ರ ಏನಾದರೂ ಗುಣಮಟ್ಟದ ಸಾಹಿತ್ಯವನ್ನು ಹೊರತರಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಪ್ರತಿಭೆ ಮಶಾಕ ತಾಳಿಕೋಟೆ ಅವರ ಹಿತವಾದ ಮಾತು ಪ್ರತಿಯೊಬ್ಬರಿಗೂ ಹತ್ತಿರವಾಗುವದರಲ್ಲಿ ಎರಡು ಮಾತಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಪಾಟೀಲ ಮಾತನಾಡಿ, ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವ ಸಮ ಯದಲ್ಲಿ ಕನ್ನಡ ಪ್ರೇಮ, ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಮಶಾಕ ತಾಳಿಕೋಟೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುತ್ತಿರುವುದು ಒಳ್ಳೆಯದು ಎಂದರು.
ಹಿರಿಯ ಸಾಹಿತಿ ವಿರೇಶ ಹಳ್ಳುರು ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಸಾಹಿತ್ಯಿಕ ಪುಸ್ತಕ ಕವನ ಸಂಕಲಗಳನ್ನು ಕೊಂಡು ಓದುವ ಅಭಿರುಚಿಯನ್ನು ಬೆಳಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ ದಂಡಿನ್, ಬಸವರಾಜಸ್ವಾಮಿ ಸ್ಥಾವರಮಠ, ಸುಭಾನ ಅಲಿ ಡೆಕ್ಕನ್ ಮಾತನಾಡಿದರು.
ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಮಲಗಲದಿನ್ನಿ, ಚನ್ನಕುಮಾರ ಚಿಂಚೋಳಿ, ಖಾಸೀಂಸಾಬ್ ಅವರಾದಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಸಿನ್ನೂರು, ಮಶಾಕ ತಾಳಿಕೋಟೆ ಇದ್ದರು. ಶಿಕ್ಷಕ ಮಶಾಕ ಯಾಳಗಿ ಸ್ವಾಗತಿಸಿದರು. ಶಿಕ್ಷಕಿ ನೀಲಮ್ಮ ನಾಗರಬೆಟ್ಟ ನಿರೂಪಿಸಿದರು. ವೀರಣ್ಣ ಬೆಳ್ಳುಬ್ಬಿ ವಂದಿಸಿದರು.