ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ವಜ್ಜಲ, ಕಾಮನಟಗಿ, ದ್ಯಾಮನಹಾಳ, ಕೊಡೇಕಲ್ಲ, ರಾಜನಕೊಳೂರ, ನಾರಾಯಣಪುರದಲ್ಲಿ ಸಂಕ್ರಾಂತಿಯ ಮುನ್ನಾ ದಿನವಾದ ಶುಕ್ರವಾರ ಭೋಗಿ ಹಬ್ಬವನ್ನು ಮಹಿಳೆಯರು ತಮ್ಮ ಮನೆಗಳಲ್ಲಿ ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಶುಕ್ರವಾರ ಬೆಳಿಗ್ಗೆ ಮಹಿಳೆಯರು ಒಂದು ಮೊರದಲ್ಲಿ ಅರಿಶಿಣ, ಕುಂಕುಮ, ಅಕ್ಕಿ, ಗೋಧಿ, ಬೇಳೆ, ಹಿಟ್ಟು, ತುಪ್ಪ, ಎಳ್ಳು, ಸಕ್ಕರೆ, ಎಣ್ಣೆ, ಬೆಣ್ಣೆ, ಹತ್ತಿ ವಿವಿಧ ತರಕಾರಿ, ದಕ್ಷಿಣೆ ಮತ್ತು ಹಣ್ಣುಗಳನ್ನಿಟ್ಟು ಇನ್ನೊಂದು ಮೊರವನ್ನು ಮುಚ್ಚಿ ಪರಸ್ಪರ ಕೊಟ್ಟು ಬಾಗಿನ ಪಡೆಯುವುದು ಕಂಡು ಬಂದಿತು.
ಮೊರವನ್ನು ಮೂರು ಬಾರಿ ತೂಗುವ ಮೂಲಕ ಬಾಗಿನ ಪಡೆಯುವುದು ಈ ಹಬ್ಬದ ವಿಶೇಷಗಳಲ್ಲಿ ಒಂದು. ಮೂರು ಬಾರಿ ಮೊರವನ್ನು ತೂಗುವುದರಿಂದ ತಮ್ಮ ಮನೆಗಳಲ್ಲಿ ಮೂರು ತಲೆಮಾರುಗಳವರೆಗೂ ಶಾಂತಿ–ನೆಮ್ಮದಿ ನೆಲೆಸಲಿ ಎಂದು ಸಿರಿ ಗೌರಿಯನ್ನು ಪ್ರಾರ್ಥಿಸುವ ಸಂಕೇತವಾಗಿದೆ ಎಂದು ಹುಣಸಗಿಯ ವಿಜಯಾಚಾರ್ಯ ಜೋಶಿ ತಿಳಿಸಿದರು. ನಾರಾಯಣ ಪುರದಲ್ಲಿ ದ್ರೌಪತಿಬಾಯಿ ಜೋಶಿ, ಜಯಶ್ರೀ ಕೊಳ್ಳಿ, ಉಷಾಬಾಯಿ, ಶಾರದಾ ಕೋಳ್ಳಿ, ಚಂದ್ರಕಲಾ, ಕವಿತಾ ಪುರೋಹಿತ್, ಛಾಯಾ ಮಾಧವರಾವ್ ಹಾಗೂ ವಜ್ಜಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಜುಳಾ ಅರಳಿಗಿಡದ, ಸುಧಾಬಾಯಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.