ಯಾದಗಿರಿ: ‘ಜಿಲ್ಲೆಯ 90 ಜನವಸತಿ ತಾಂಡಾಗಳನ್ನು 3 ತಿಂಗಳೊಳಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು’ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ತಹಶೀಲ್ದಾರ್ ಮತ್ತು ಎಡಿಎಲ್ಆರ್ ಅಧಿಕಾರಿಗಳು ಸಂಬಂಧಪಟ್ಟ ತಾಂಡಾಗಳಲ್ಲಿ ಜಂಟಿ ಸಭೆ ನಡೆಸಿ, ತಾಂಡಗಳು ಯಾರಿಗೆ ಸೇರಿದ್ದು ಎಂದು ಮೊದಲು ತಿಳಿದುಕೊಳ್ಳಬೇಕು. ಇದರಲ್ಲಿ ಅರಣ್ಯ ಭೂಮಿ, ಕಂದಾಯ ಭೂಮಿ ಅಥವಾ ಖಾಸಗಿ ಭೂಮಿ ಯಾವವು ಎಂದು ಅರಿತುಕೊಳ್ಳಬೇಕು. ಜಿಲ್ಲೆ 90 ತಾಂಡಾಗಳ ಜೊತೆಗೆ ಅರಣ್ಯ ಪ್ರದೇಶದಲ್ಲಿರುವ 3 ಜನವಸತಿಗಳನ್ನು ಕೂಡ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸಹಾಯಕ ಆಯುಕ್ತರು, ತಹಶೀಲ್ದಾರ್, ಭೂದಾಖಲೆಗಳ ಸಹಾಯಕ ನಿರ್ದೇಶಕರು ಕ್ರಮ ಕೈಗೊಳ್ಳಬೇಕು’ ಎಂದರು.
‘ತಾಂಡಾಗಳು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದಲ್ಲಿ ಅರಣ್ಯ ಸಮಿತಿಯ ಒಪ್ಪಿಗೆ ಪಡೆದು ಘೋಷಣೆ ಮಾಡಬೇಕಾಗಿರುತ್ತದೆ. ಕನಿಷ್ಠ 10 ವರ್ಷಗಳ ಕಾಲ ದಾಖಲೆ ರಹಿತವಾಗಿದ್ದರೂ ಜನವಸತಿ ಇರುವ ತಾಂಡಾ, ಹಟ್ಟಿ ಹಾಗೂ ಹಾಡಿಯ ಪ್ರತಿ ಮನೆಯವರಿಗೆ ಹಕ್ಕು ಪತ್ರ ನೀಡಿ, ನಾಗರಿಕರಿಗೆ ಸಿಗುವ ಮೂಲ ಸೌಕರ್ಯಗಳನ್ನು ನೀಡಲು ಕ್ರಮ ಕೈಗೊಳಬೇಕು’ ಎಂದು ನಿರ್ದೇಶಿಸಿದರು.
‘ಜಿಲ್ಲೆಯಲ್ಲಿ 728 ಜನವಸತಿ ತಾಂಡಾ ಪ್ರದೇಶಗಳಿವೆ. ಇವುಗಳಲ್ಲಿ 50 ಕ್ಕಿಂತ ಹೆಚ್ಚಿನ ತಾಂಡಾಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. 90 ಜನವಸತಿ ಪ್ರದೇಶಗಳು ಖಾಸಗಿ ಒಡೆತನದ ಭೂಮಿಯಲ್ಲಿದ್ದು, ಭೂಮಿ ದತ್ತಾಂಶದ ಪ್ರಕಾರ 551 ಮಾತ್ರ ಜನವಸತಿ ತಾಂಡಾಗಳಿವೆ. 3 ತಾಂಡಾಗಳು ಅರಣ್ಯ ಪ್ರದೇಶದಲ್ಲಿವೆ. ಡಿಸೆಂಬರ್ 16, 2017ರಲ್ಲಿ ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯೊಂದಿಗೆ ಜಾರಿಗೊಳಿಸಿ ಗೆಜೇಟ್ ಮಾಡಲಾಗಿದೆ. ಅದರಂತೆ ಯಾವುದೇ ದಾಖಲೆಗಳು ಇಲ್ಲದೆ ಖಾಸಗಿ ಜಮೀನಿನಲ್ಲಿ ವಾಸಿಸುವ ತಾಂಡಾಗಳನ್ನು 3 ತಿಂಗಳೊಳಗೆ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಶ್ರಮಿಸಬೇಕು’ ಎಂದರು.
ಸಂಸದ ಡಾ.ಉಮೇಶ ಜಿ.ಜಾಧವ್, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಕರ್ನಾಟಕ ತಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ ರಾಠೋಡ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.