ಯಾದಗಿರಿ: ಆನೆಕಾಲು ರೋಗ ನಿವಾರಣೆಗಾಗಿ ಜಿಲ್ಲೆಯಾದ್ಯಂತ ನವೆಂಬರ್ 4ರಿಂದ 22ರವರೆಗೆ ಹಮ್ಮಿಕೊಂಡಿರುವ ಸಾಮೂಹಿಕವಾಗಿ ಡಿಇಸಿ, ಅಲ್ಬೆಂಡಜೋಲ್ ಹಾಗೂ ಐವರಮೆಕ್ಟೀನ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮವನ್ನು ಯಶಸ್ವಿಕೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆನೆಕಾಲು ರೋಗ ನಿಯಂತ್ರಣ ಸಲುವಾಗಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಇದೇ ಮೊದಲ ಬಾರಿಗೆ 3 ವಿಧದ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ನಡೆಯುತ್ತಿದೆ. ನವೆಂಬರ್ 4 ರಿಂದ 8ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ- ಕಾಲೇಜು, ವಸತಿ ನಿಲಯಗಳು, ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಬೃಹತ್ ಕಟ್ಟಡ ನಿರ್ಮಾಣ ಸ್ಥಳಗಳು, ಕೈಗಾರಿಕೋದ್ಯಮ ಸ್ಥಳಗಳು, ವಲಸೆ ಜನರು ಬೀಡು ಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ, ತಪ್ಪದೇ ಈ ಮಾತ್ರೆಗಳನ್ನು ನುಂಗಿಸಬೇಕು. ನ.13ರಿಂದ 15ರವರೆಗೆ ಮನೆಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ನುಂಗಿಸಬೇಕು. ನ.16ರಿಂದ 22ರವರೆಗೆ ಪುನರ್ ಭೇಟಿ ಅನುಸರಣ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿ, ಮಾತ್ರೆ ನುಂಗಿರುವ ಬಗ್ಗೆ ತಿಳಿದುಕೊಳ್ಳುವಂತೆ ಅವರು ನಿರ್ದೇಶಿಸಿದರು.
14,10,986 ಜಿಲ್ಲೆಯ ಜನಸಂಖ್ಯೆ ಇದ್ದು, ಇವರಲ್ಲಿ 12,98,107 ಐವರಮೆಕ್ಟೀನ್, ಡಿಇಸಿ ಮಾತ್ರೆಗಳ ಸೇವನೆಗೆ ಅರ್ಹರಿದ್ದಾರೆ. ಮಾತ್ರೆಗಳನ್ನು ನುಂಗಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 2,440 ಜನರನ್ನು ನಿಯೋಜಿಸಲಾಗಿದೆ. ಮಾತ್ರೆ ನುಂಗಿಸುವವರ ಮೇಲ್ವಿಚಾರಣೆಗೆ 122 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿಯೊಬ್ಬರೂ ಮಾತ್ರೆ ನುಂಗುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕೂಡ ಮಾತ್ರೆಗಳನ್ನು ನುಂಗಿ ತಮ್ಮ ಅಧೀನ ಸಿಬ್ಬಂದಿಗಳಿಗೆ ನುಂಗುವಂತೆ ಸ್ಫೂರ್ತಿ ತುಂಬಬೇಕು. ಗ್ರಾಮಗಳಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಮೂಲಕ ಪ್ರತಿಶತ ಸಾಧನೆ ಮಾಡಬೇಕೆಂದು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಮಾತನಾಡಿ, ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಅತಿ ವೃದ್ಧಾಪ್ಯದಿಂದಿರುವವರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಂದ ನರಳುತ್ತಿರುವವರು ಐವರ್ಮೆಕ್ಟೀನ್, ಡಿ.ಇ.ಸಿ ಹಾಗೂ ಅಲ್ಬೆಂಡಜೋಲ್ ಮಾತ್ರೆಗಳನ್ನು ಸೇವಿಸುವಂತಿಲ್ಲ. ಖಾಲಿ ಹೊಟ್ಟೆಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.
ಐವರ್ಮೆಕ್ಟೀನ್ ಮತ್ತು ಡಿಇಸಿ ಮಾತ್ರೆಗಳನ್ನು ಸೋಂಕು ಹೊಂದಿದ ಮತ್ತು ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳು ಸೇವಿಸಿದಾಗ ಮಾತ್ರ ಅವರ ರಕ್ತದಲ್ಲಿರುವ ಜಂತುಗಳು ನಾಶ ಹೊಂದುವುದರಿಂದ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ವಾಂತಿ, ತಲೆ ಸುತ್ತುವಿಕೆ ಕಂಡುಬರುತ್ತವೆ. ಇವು ತಾತ್ಕಾಲಿಕವಾಗಿದ್ದು, ಒಂದು ದಿನದಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆ ಉಪಶಮನವಾಗುತ್ತವೆಎಂದು ವಿವರಿಸಿದರು.
ಯಾದಗಿರಿ ಡಿವೈಎಸ್ಪಿ ಯು.ಶರಣಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾರಾಯಣಪ್ಪ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***
ಮಾತ್ರೆಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಡಿಇಸಿ ಮತ್ತು ಚೀಪಬಹುದಾದ ಅಲ್ಬೆಂಡಜೋಲ್ ಮಾತ್ರೆಗಳನ್ನು ವಯಸ್ಸಿಗನುಗುಣವಾಗಿ ನೀಡಲಾಗುವುದು. ಐವರ್ಮೆಕ್ಟಿನ್ ಮಾತ್ರೆಗಳನ್ನು ವ್ಯಕ್ತಿಗಳ ಎತ್ತರಕ್ಕನುಗುಣವಾಗಿ ನೀಡಲಾಗುವುದು.
ಡಾ.ಸೂರ್ಯಪ್ರಕಾಶ ಎಂ.ಕಂದಕೂರ,ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.