ಶಹಾಪುರ: ತಾಲ್ಲೂಕಿನ ದರ್ಶನಾಪುರ ಗ್ರಾಮದಲ್ಲಿ ವರ್ಷದ ಹಿಂದೆ ನಡೆದಿದ್ದ ವಿದ್ಯಾರ್ಥಿ ಮಂಜುನಾಥನ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರ ಅಶೋಕ ಅವರ ಹೇಳಿಕೆಯನ್ನು ಮಂಗಳ ವಾರ ಗೋಗಿ ಠಾಣೆಯ ಪೊಲೀಸರು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
164 ಸಿಆರ್ ಪಿಸಿ ಅಡಿಯಲ್ಲಿ ಸಾಕ್ಷಿದಾರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಆಗ ಸಾಕ್ಷಿದಾರ ಅಶೋಕ ಅವರು ನ್ಯಾಯಾಧೀಶರ ಮುಂದೆ ದರ್ಶನಾಪುರ ಗ್ರಾಮದ ಯುವತಿಯನ್ನು ಮಂಜುನಾಥ ಪ್ರೀತಿ ಮಾಡುತ್ತಿದ್ದರಿಂದ ಹೆದರಿಸಿ ಬೆದರಿಸಿದ್ದರು. ನಂತರ ರಾಮಣ್ಣ, ರಾಯಪ್ಪ, ಮಲ್ಲಪ್ಪ, ಭೀಮರಾಯ ಕೂಡಿ ಕೊಲೆ ಮಾಡಿ ನಂತರ ಹಗ್ಗದಿಂದ ಎಳೆದು ನೇತು ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
2021 ಜುಲೈ 3ರಂದು ಮಂಜುನಾಥನ ತಂದೆ ಮಲ್ಲಪ್ಪ ಪೂಜಾರಿ ಅವರು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿ, ನನ್ನ ಮಗನ ಆತ್ಮಹತ್ಯೆ ಪ್ರಚೋದನೆಗೆ ಅಶೋಕ, ರಾಮಣ್ಣ, ರಾಯಪ್ಪ, ಮಲ್ಲಪ್ಪ, ಭೀಮರಾಯ ಕಾರಣರಾಗಿದ್ದಾರೆ ಎಂದು ಗೋಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗ ಪೊಲೀಸರಿಗೆ ಸದರಿ ಪ್ರಕರಣವು ಸವಾಲು ಆಗಿ ಪರಿಣಮಿಸಿತು.
ಆಗ ಪೊಲೀಸರು ವೈಜ್ಞಾನಿಕವಾಗಿ ತನಿಖೆಗೆ ಒಳಪಡಿಸಲು ಐವರು ಆರೋಪಿಗಳನ್ನು ಪಾಲಿಗ್ರಾಫ್ (ಮಂಪರು ಪರೀಕ್ಷೆಗೆ) ಒಳಪಡಿಸಲು ನ್ಯಾಯಾಲಯಕ್ಕೆ ಗೋಗಿ ಠಾಣೆಯ ತನಿಖಾಧಿಕಾರಿ ಅಯ್ಯಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಆಗ ಅದರಲ್ಲಿ ಅಶೋಕ ಹೊರತುಪಡಿಸಿ ಉಳಿದ ನಾಲ್ವರು ಮಂಪರು ಪರೀಕ್ಷೆಯನ್ನು ನಿರಾಕರಿಸಿದರು.
ನಂತರ ತನಿಖಾಧಿಕಾರಿಯು ಅಶೋಕ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ ಧನಾತ್ಮಕ ಅಂಶಗಳು ಬೆಳಕಿಗೆ ಬಂದವು. ನಾಲ್ವರು ಸೇರಿ ಕೊಲೆ ಮಾಡಿದ್ದಾರೆ, ಆದರೆ ಅಶೋಕ ಕೊಲೆ ಮಾಡಿಲ್ಲ ಎಂಬ ಮಂಪರು ಪರೀಕ್ಷೆಯ ವರದಿಯ ಆಧಾರದ ಮೇಲೆ ಅಶೋಕ ಅವರನ್ನು ಪ್ರಕರಣದಿಂದ ಕೈಬಿಟ್ಟು ಸಾಕ್ಷಿದಾರರನ್ನಾಗಿ ತೆಗೆದುಕೊಂಡು ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣದ ಆರೋಪವನ್ನು ಹೊರಿಸಲಾಗಿದೆ ಎಂದು ಈಚೆಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದರು.
ಇವೆಲ್ಲದರ ಮಧ್ಯೆ ನಾಲ್ವರು ಆರೋಪಿಗಳು ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿ ದ್ದರಿಂದ ಜಾಮೀನು ತಿರಸ್ಕೃರಿಸಲು ಹೈಕೋರ್ಟ್ಗೆ ಮನವಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಸಾಕ್ಷಿದಾರ ಅಶೋಕ ಅವರ 164 ಸಿಆರ್ ಪಿಸಿ ಅಡಿ ನ್ಯಾಯಾಧೀಶರ ಮುಂದೆ ದಾಖಲಾದ ಹೇಳಿಕೆಯನ್ನು ಪಡೆದು ಕೊಂಡು ಕೋರ್ಟ್ಗೆ ಸಲ್ಲಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.