ಗುರುಮಠಕಲ್: ‘ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿದೆ. ವಾಯು ಮಾಲಿನ್ಯದಿಂದ ಮನುಷ್ಯನನ್ನು ಒಳಗೊಂಡಂತೆ ಎಲ್ಲ ಜೀವರಾಶಿಗಳಿಗೂ ಮಾರಣಾಂತಿಕಸಮಸ್ಯೆಗಳು ಎದುರಾಗಲಿವೆ’ ಎಂದು ಯಾದಗಿರಿ ಆರ್ಟಿಒ ಇನ್ಸ್ಪೆಕ್ಟರ್ ವೆಂಕಟಪ್ಪ ಕಲಾಲ್ ತಿಳಿಸಿದರು.
ಪಟ್ಟಣದ ಶ್ರೀಲಕ್ಷ್ಮಿ ತಿಮ್ಮಪ್ಪ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಾಯು ಮಾಲಿನ್ಯವನ್ನು ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಸಿಗುವುದು ಕಷ್ಟ’ ಎಂದರು.
ಆರ್ಟಿಒ ವಸಂತ ಚೌವ್ಹಾಣ್ ಮಾತನಾಡಿ,‘ನಮ್ಮ ಜೀವನ ಸುಖಮಯವಾಗಿರಬೇಕೆಂದರೆ ಆರೋಗ್ಯ ಉತ್ತಮವಾಗಿರಬೇಕು. ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರದ ಅವಶ್ಯಕತೆ ಇದೆ. ಪರಿಸರ ರಕ್ಷಣೆ ಎಲ್ಲರ ಹೊಣೆ’ ಎಂದು ಹೇಳಿದರು.
ಇಂದು ಜಾಗತಿಕ ಮಟ್ಟದಲ್ಲಿ ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗುತ್ತದೆಯೋ, ಇಲ್ಲವೋ ಎಂದು ಭಯವಾಗುತ್ತಿದೆ ಎಂದರು.
ಸಂಸ್ಥೆಯ ಆವರಣದಲ್ಲಿ ಸಸಿ ನೆಡಲಾಯಿತು. ಶಿಕ್ಷಣ ಸಂಸ್ಥೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.