ಹುಣಸಗಿ: ಸಮೀಪದ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೆಬ್ಬಾಳ (ಕೆ) ಗ್ರಾಮ ಹಲವು ವರ್ಷಗಳಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ದೇವಪುರ– ಮನಗೂಳಿ ರಾಜ್ಯ ಹೆದ್ದಾರಿಯಿಂದ 1.5 ಕಿ.ಮೀ ದೂರದಲ್ಲಿರುವ ಈ ಗ್ರಾಮವು ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮಕ್ಕೆ ತೆರಳುವ ರಸ್ತೆಯುಗುಂಡಿಗಳಿಂದ ತಂಬಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಈ ಕುರಿತು ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಸೂಕ್ತ ಒಳ ಚರಂಡಿ ವ್ಯವಸ್ಥೆ ಇಲ್ಲದ ಗ್ರಾಮದ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಇದರಿಂದಾಗಿ ಇಲ್ಲಿನ ಮರಗಮ್ಮ ದೇವಸ್ಥಾನ ಬಳಿ ಬಹುತೇಕ ನೀರು ಶೇಖರಣೆಯಾಗಿದ್ದು, ಸೊಳ್ಳೆಗಳ ಕಾಟ ಮಿತಿ ಮೀರಿದೆ. ನಿರಂತರ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ: ಗ್ರಾಮದ ಶಾಲಾ ಆವರಣದಲ್ಲಿ ನಾಲ್ಕು ವರ್ಷಗಳ ಹಿಂದೆ ಭೂ ಸೇನಾ ನಿಗಮದಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ ಇಂದಿಗೂ ಈ ಘಟಕವನ್ನು ಗ್ರಾಮ ಪಂಚಾಯಿತಿಗೆ ವಹಿಸಿ ಕೊಟ್ಟಿರುವದಿಲ್ಲ. ಇದರಿಂದಾಗಿ ನಿರ್ವಹಣೆ ಇಲ್ಲದೇ ಘಟಕ ತುಕ್ಕು ಹಿಡಿದಿದೆ.
‘ಘಟಕದ ಸುತ್ತಲೂ ಮುಳ್ಳುಕಂಟಿಗಳು ತುಂಬಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ಘಟಕ ಬಳಕೆಗೆ ಬಾರದೆ ಹಾಳಾಗಿದೆ’ ಎಂದು ಗ್ರಾಮಸ್ಥರಾದ ನಿಂಗು ಪಾಟೀಲ, ನೀಲಕಂಠ ವಿಶ್ವಕರ್ಮ,ಪರಮಣ್ಣ ಶೆಟ್ಟಿ ಮತ್ತು ತಮ್ಮಣ್ಣ ದೂರಿದರು.
ಇನ್ನೂ ಮಳೆ ಬಂದರೆ ಶಾಲಾ ಆವಣದಲ್ಲಿ ನೀರು ನುಗ್ಗಿ ಕೆಸರು ಗದ್ದೆಯಂತಾಗುತ್ತದೆ. ಅಲ್ಲದೇ ಗ್ರಾಮದಲ್ಲಿ ಸ್ವಚ್ಚ ಭಾರತ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ ಅರಿವಿನ ಕೊರತೆಯಿಂದಾಗಿ ಅವುಗಳು ಸದ್ಬಳಕೆಯಾಗುತಿಲ್ಲ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ತಿಳಿಸಿದರು.