ಯಾದಗಿರಿ: ತಾಲ್ಲೂಕಿನ ವಿಶ್ವಾಸಪುರ ತಾಂಡಾದಲ್ಲಿನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆಗಟ್ಟಿದ್ದಾರೆ.
ಯುವತಿ ಪೋಷಕರು ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸುತ್ತಿರುವ ವಿಷಯ ತಿಳಿದ ಯಾದಗಿರಿ ಗ್ರಾಮೀಣ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬಾಲ್ಯ ವಿವಾಹ ತಡೆದು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಯುವತಿ ದಾಖಲಾತಿ ಪರಿಶೀಲಿಸಿದಾಗ 16 ವರ್ಷ 4 ತಿಂಗಳಿತ್ತು. 18 ವರ್ಷ ಪೂರ್ಣಗೊಂಡಿರಲಿಲ್ಲ.ಪೋಷಕರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕೆಲಸ ಮಾಡುತ್ತಿರುವ ಯುವಕನಿಗೆ ಕೊಟ್ಟು ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಸುರೇಶಕುಮಾರ ಚವ್ಹಾಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಧಾ ಮಣ್ಣೂರ ತಂಡ ನಗರದ ಮಕ್ಕಳ ಕಲ್ಯಾಣ ಸಮಿತಿ ಕಚೇರಿಗೆ ಯುವತಿಯನ್ನು ಹಾಜರುಪಡಿಸಿದ್ದಾರೆ.