ಯಾದಗಿರಿ:ಜಿಲ್ಲೆಯಲ್ಲಿ ಕೊರೊನಾಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿಜಿಲ್ಲಾಡಳಿತ ವತಿಯಿಂದ ಸಹಾಯವಾಣಿ ಆರಂಭಿಸಿದ್ದು, ದಿನನಿತ್ಯ ಹತ್ತಾರು ಕರೆಗಳು ಬರುತ್ತಿವೆ. ತಕ್ಷಣವೇ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಜನರಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಮಾರ್ಚ್ ತಿಂಗಳಲ್ಲಿ ಸಹಾಯವಾಣಿ ಆರಂಭಿಸಿದ್ದು, ಇಲ್ಲಿಯವರೆಗೆ ನೂರಾರು ಜನರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಆಹಾರ, ಆರೋಗ್ಯ ಹೀಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದ್ದರೂ ಸಹಾಯವಾಣಿ ಸಿಬ್ಬಂದಿ ಉತ್ತರಿಸುತ್ತಾರೆ.
ಸಿಬ್ಬಂದಿ ವಿವರ: ಆರೋಗ್ಯ ಸಹಾಯವಾಣಿ-104 ಕ್ಕೆ ಬರುವ ಕರೆಗಳಿಗಾಗಿ ಮೂವರು ಸಿಬ್ಬಂದಿಯನ್ನು ಮೀಸಲಿರಿಸಿದೆ. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿಗೆ ಮೂರು ತಂಡಗಳಲ್ಲಿ 4 ಜನರನ್ನು ನೇಮಿಸಲಾಗಿದೆ. ಸಹಾಯವಾಣಿ ಸಂಖ್ಯೆ 08473-253950 ಗೆ ದಿನಕ್ಕೂ ಹತ್ತಾರು ಕರೆಗಳು ಬರುತ್ತಿವೆ.
ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವಿಷಯವಿದ್ದರೆ ತಾಲ್ಲೂಕು ಆರೋಗ್ಯ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಲಾಗುತ್ತಿದೆ. 8 ತಾಸಿಗೆ ಒಂದು ತಂಡದಂತೆ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ತಂಡದಲ್ಲಿ ನಾಲ್ಕು ಜನ ಕೆಲಸ ನಿರ್ವಹಣೆ ಮಾಡುತ್ತಾರೆ. ಕೇಸ್ ವರ್ಕರ್, ಶಿರಸ್ತೇದಾರ, ಡಾಟಾ ಆಪರೇಟರ್, ‘ಡಿ’ ಗ್ರೂಪ್ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಕರೆ ಸ್ವೀಕರಿಸುವುದು, ಸಂಬಂಧಿಸಿದವರಿಗೆ ಮಾಹಿತಿ ತಲುಪಿಸುವುದು ಮತ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವುದಕ್ಕೆ ಈ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ. ಕೈ ಸ್ವಚ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಗುಂಪು ಸೇರಬಾರದು ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಪ್ರತಿನಿತ್ಯ ಆರೋಗ್ಯ ವಿಚಾರಣೆ: ಸಹಾಯವಾಣಿ ಸಿಬ್ಬಂದಿ ವಿದೇಶದಿಂದ ಮರಳಿ ಬಂದವರ, ಆಶಾ ಕಾರ್ಯಕರ್ತೆಯರ, ಕಿರಿಯ ಆರೋಗ್ಯ ಸಹಾಯಕರ ಆರೋಗ್ಯ ವಿಚಾರಣೆ ಮಾಡುತ್ತಾರೆ.
ಯಾದಗಿರಿ ತಾಲ್ಲೂಕಿನಲ್ಲಿ 30 ಜನ, ಶಹಾಪುರ ತಾಲ್ಲೂಕಿನಲ್ಲಿ 19 ಹಾಗೂ ಸುರಪುರ ತಾಲ್ಲೂಕಿನಲ್ಲಿ 22 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 71 ಜನ ವಿದೇಶಗಳಿಂದ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸುತ್ತಿವೆಯಾ? ಆರೋಗ್ಯ ಹೇಗೆ ಇದೆ? ಇತ್ಯಾದಿ ವಿಚಾರಿಸುತ್ತಾರೆ.
ಅಲ್ಲದೆಜಿಲ್ಲೆಯ ಐವರು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ತೆರಳಿ ಮರಳಿ ಬಂದಿದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿ ಇರುವವರ ಆರೋಗ್ಯವನ್ನೂ ಸಹಾಯವಾಣಿ ಸಿಬ್ಬಂದಿವಿಚಾರಿಸುತ್ತಿದ್ದಾರೆ. ಕರೆ ಮಾಡಿದವರ ವಿವರ ದಾಖಲಿಸಿಕೊಂಡು ಸಮಸ್ಯೆ ಬಗೆಹರಿದಿಯಾಎನ್ನುವುದನ್ನು ಫಾಲೋ ಆಪ್ ಮಾಡುತ್ತಾರೆ.
‘ಆಹಾರ, ದವಸ ಧಾನ್ಯ ವಿತರಣೆ ವೇಳೆ ‘ಅಂತರ ಕಾಯ್ದುಕೊಳ್ಳಬೇಕು’ ಎನ್ನುತ್ತಾರೆಹೆಚ್ಚುವರಿ ಜಿಲ್ಲಾಧಿಕಾರಿಪ್ರಕಾಶ ಜಿ.ರಜಪೂತ.
***
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಮತ್ತು ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಕೊಳ್ಳಿ
- ಪ್ರಕಾಶ ಜಿ.ರಜಪೂತ, ಹೆಚ್ಚುವರಿ ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.