ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಮಂಗಳವಾರ ಬೀರಲಿಂಗೇಶ್ವರ ಜಾತ್ರೆ ಮತ್ತು ಕೂಡ್ಲಿಗೆಪ್ಪ ದೇವರ ಜೋಡಿ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ವಿಶೇಷ ನಂದಿ ಮತ್ತು ಕಂಟ್ಲಿ ಪೂಜೆ ಸಲ್ಲಿಸಿದ ನಂತರ ಜೋಡಿ ಪಲ್ಲಕ್ಕಿಯಲ್ಲಿ ಎರಡೂ ದೇವರ ಬೆಳ್ಳಿಯ ಮೂರ್ತಿ ಹಾಗೂ ಬೆತ್ತಗಳನ್ನಿಟ್ಟು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಡೊಳ್ಳು ಹಾಗೂ ಆಕರ್ಷಕ ವೀರಗಾಸೆ ಕುಣಿತ ಗಮನಸೆಳೆಯಿತು. ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಡೊಳ್ಳಿನ ಪದ, ರಾತ್ರಿ ಭಜನೆ ನಡೆಯಿತು.
ಉತ್ಸವದಲ್ಲಿ ಪಾಲ್ಗೊಂಡಿದ್ದ ಯುವ ಮುಖಂಡ ರಾಜಾ ವೇಣುಗೋಪಾಲನಾಯಕ ಮಾತನಾಡಿ, ಹಬ್ಬ ಜಾತ್ರೆಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ದ್ಯೋತಕವಾಗಿದ್ದು, ಈ ಆಚರಣೆಗಳ ಮೂಲಕ ನಮ್ಮಲ್ಲಿನ ದೂರವಾಗಿ ಪರಸ್ಪರ ಎಲ್ಲರೂ ಸಾಮರಸ್ಯದೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲರೂ ಒಟ್ಟಾಗಿ ಪಾಲ್ಗೊಂಡು ಉತ್ಸವ ಆಚರಿಸುವ ಮೂಲಕ ಪರಸ್ಪರ ಬಾಂಧವ್ಯ ಗಟ್ಟಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಜೋಡು ಪಲ್ಲಕ್ಕಿ ಉತ್ಸವದಲ್ಲಿ ವಜ್ಜಲ ಸೇರಿ ಸುತ್ತಮುತ್ತಲಿನ ಭಕ್ತರು ಭಕ್ತಿ ಸಮರ್ಪಿಸಿದರು. ವಜ್ಜಲ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿದ ನಂತರ ಜಾತ್ರೆ ಮುಕ್ತಾಯವಾಯಿತು. ಜಾತ್ರೆಗೆ ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಈಶ್ವರಪ್ಪ ಶ್ರೀಗಿರಿ, ಗೋಪಾಲದೊರೆ ಅರಕೇರಾ(ಜೆ), ಚಂದ್ರಕಾಂತ, ಚಂದಪ್ಪ ಗಿಂಡಿ, ರೇವಣಸಿದ್ದಪ್ಪ ಹೊರಟ್ಟಿ, ಕೂಡ್ಲಿಗೆಪ್ಪ ಬೈಚಬಾಳ, ಶ್ರೀಶೈಲ ದೇವತಕಲ್ಲ, ನಿಂಗಪ್ಪ ಬೋಯಿ, ಸಿದ್ದು ಅಬ್ಯಾಳಿ, ಕರೆಪ್ಪ ದೊಡ್ಡಮನಿ, ಸಿದ್ದಣ್ಣ ಮೇಟಿ, ಹನುಮಂತ್ರಾಯ ಕನ್ನೆಳ್ಳಿ, ಬಸಣ್ಣ ಕಲ್ಲತ್ತಿ, ಬಸಪ್ಪ ಮೇಟಿ, ಬೂಮಣ್ಣ, ಬೀರಪ್ಪ, ಸಿದ್ದಣ್ಣ ಗುಲಗುಂಜಿ, ಬಸವರಾಜ ಮೇಟಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.