ಸೈದಾಪುರ: ಬಳಸುವ ಪ್ರತಿ ವಸ್ತುವಿನಲ್ಲಿ ಪ್ಲಾಸ್ಟಿಕ್ ಅಂಶಗಳಿದ್ದು, ಅದರ ಬಳಕೆ ಕಡಿಮೆಯಾಗಬೇಕು. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಉತ್ಪಾದನಾ ಕೈಗಾರಿಕೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಭೀಮಣ್ಣಗೌಡ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಕಲಬುರ್ಗಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಹಾಗೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ, ಸರ್ಕಾರಿ ಕೈಗಾರಿಕಾ ತರಬೇತಿಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸ್ವಚ್ಛ ಭಾರತ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಕುರಿತುಜನ ಜಾಗೃತಿ ಮೂಡಿಸುವುದು ಅವಶ್ಯ. ಬಯಲು ಶೌಚಮುಕ್ತ ಗ್ರಾಮ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ವಕೀಲ ಬಸವರಾಜ ಪಾಟೀಲ ಕ್ಯಾತನಾಳ ಮಾತನಾಡಿ, ಪರಿಸರ ಹಾಗೂ ಜನರ ಮೇಲೆ ಪ್ರಾಸ್ಟಿಕ್ ಪರಿಣಾಮ ಬೀರುತ್ತಿದೆ. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಸೈದಾಪುರ ಐಸಿಡಿಎಸ್ ಮೇಲ್ವಿಚಾರಕಿ ನಾಗಮ್ಮ, ಕಲಬುರ್ಗಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ.ಎಸ್.ಟಿ ಮಾತನಾಡಿದರು.
ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ನಂತರ ರಂಗೋಲಿ, ಚಿತ್ರಕಲಾ, ಪ್ರಬಂಧ ಸ್ಪರ್ಧೇಗಳಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಲಿಂಗಮ್ಮ ಸಿದ್ದಪ್ಪ, ಚಂದಪ್ಪ ಕಾವಲಿ, ಭಾರತಿ ಯಲ್ಲಪ್ಪ ಕೋರೆ, ಮಹಿಪಾಲರೆಡ್ಡಿ ದುಪ್ಪಲ್ಲಿ, ವೆಂಕಟೇಶ ಪೂರಿ, ಪಿಡಿಒ ಶಂಕರಪ್ಪ.ಜಿ.ನಾಯಕ, ಮಹ್ಮದ ಮೌಲಾನಾ, ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಪ್ರಾಚಾರ್ಯ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಇದ್ದರು.